ರಾಜ್ಯದ ನೂತನ ಸಿಎಂಗೆ ಅಭಿನಂದಿಸಿ ಯಡಿಯೂರಪ್ಪ ಕಾರ್ಯ ಶ್ಲಾಘಿಸಿದ ಮೋದಿ
ನವದೆಹಲಿ, ಜುಲೈ 28: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
"ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್. ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ತಮ್ಮ ಶಾಸಕಾಂಗ ಹಾಗೂ ಆಡಳಿತಾತ್ಮಕ ಶ್ರೀಮಂತ ಅನುಭವಗಳನ್ನು ಆಡಳಿತಕ್ಕೆ ತರಲಿದ್ದಾರೆ. ನಮ್ಮ ಸರ್ಕಾರ ರಾಜ್ಯದಲ್ಲಿ ಮಾಡಿದ ಅಸಾಧಾರಣ ಕಾರ್ಯಗಳನ್ನು ಅವರು ಮುಂದುವರೆಸುವ ವಿಶ್ವಾಸ ನನಗಿದೆ. ಅವರ ಫಲಪ್ರದ ಅಧಿಕಾರಾವಧಿಗೆ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ.
ಬೊಮ್ಮಾಯಿ ನಾಯಕತ್ವದಲ್ಲಿ ರಾಜ್ಯ ಉತ್ತಮ ಸಾಧನೆ ತೋರಲಿದೆ; ಜೋಶಿ
ಇದೇ ಸಂದರ್ಭ ರಾಜ್ಯದ ಮಾಜಿ ಸಿಎಂ ಯಡಿಯೂರಪ್ಪ ಅವರ ಕಾರ್ಯವನ್ನು ಕೊಂಡಾಡಿರುವ ಮೋದಿ, "ನಮ್ಮ ಪಕ್ಷಕ್ಕೆ ಹಾಗೂ ಕರ್ನಾಟಕದ ಬೆಳವಣಿಗೆಗೆ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಲು ಯಾವ ಪದವೂ ಸರಿಸಾಟಿಯಲ್ಲ. ದಶಕಗಳ ಕಾಲ, ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದರು. ಪಕ್ಷಕ್ಕಾಗಿ ರಾಜ್ಯದಾದ್ಯಂತ ಎಲ್ಲಾ ಭಾಗಗಳಿಗೆ ಸಂಚರಿಸಿದರು ಮತ್ತು ಜನರೊಂದಿಗೆ ಸಂವಹನ ನಡೆಸಿದರು. ಸಮಾಜದ ಕಲ್ಯಾಣಕ್ಕಾಗಿ ಅವರ ಬದ್ಧತೆ ಮೆಚ್ಚುವಂಥದ್ದು" ಎಂದು ಶ್ಲಾಘಿಸಿದ್ದಾರೆ.
Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.
— Narendra Modi (@narendramodi) July 28, 2021