ವಿದ್ಯಾರ್ಥಿಗಳ ನವ ಆಲೋಚನೆಗಳನ್ನು ಮೆಚ್ಚಿದ ಪ್ರಧಾನಿ ಮೋದಿ
ದೆಹಲಿ, ಆಗಸ್ಟ್ 1: '21ನೇ ಶತಮಾನದ ಯುವಕರ ಆಕಾಂಕ್ಷೆ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ಘೋಷಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರೂಪಿಸಲಾಗಿದೆ' ಎಂದು ಪ್ರಧಾನಿ ಮೋದಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಉದ್ದೇಶಿಸಿ ಹೇಳಿದರು.
'21ನೇ ಶತಮಾನವು ಜ್ಞಾನದ ಯುಗವಾಗಿದೆ. ಕಲಿಕೆ, ಸಂಶೋಧನೆ, ನಾವೀನ್ಯತೆಗಳ ಮೇಲೆ ಹೆಚ್ಚಿನ ಗಮನ ಹರಿಸುವ ಸಮಯ ಇದು. 2020ರ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದಕ್ಕೆ ಸಹಕಾರಿಯಾಗಲಿದೆ' ಎಂದು ಮೋದಿ ತಿಳಿಸಿದರು.
'ನಾವು ಭಾರತದ ಶಿಕ್ಷಣದ ಗುಣಮಟ್ಟದತ್ತ ಗಮನ ಹರಿಸುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಅತ್ಯಂತ ಮುಂಗಡ ಮತ್ತು ಆಧುನಿಕವಾಗಿಸಲು ನಮ್ಮ ಪ್ರಯತ್ನಗಳು ನಡೆದಿವೆ' ಎಂದು ಮೋದಿ ಹೇಳಿದರು.
'ಶಿಕ್ಷಣ ನೀತಿಯಲ್ಲಿ ತಂದ ಬದಲಾವಣೆಗಳಿಂದಾಗಿ ಭಾರತದ ಭಾಷೆಗಳು ಪ್ರಗತಿ ಹೊಂದುತ್ತವೆ ಮತ್ತು ಮತ್ತಷ್ಟು ಅಭಿವೃದ್ಧಿ ಹೊಂದುತ್ತವೆ. ಇದು ಭಾರತದ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಅದರ ಏಕತೆಯನ್ನು ಹೆಚ್ಚಿಸುತ್ತದೆ' ಎಂದು ಮೋದಿ ಆತ್ಮಿವಿಶ್ವಾಸ ವ್ಯಕ್ತಪಡಿಸಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.