ನರೇಂದ್ರ ಮೋದಿ ನನ್ನ ಸಾವು ಬಯಸಿದ್ದಾರೆ: ಅರವಿಂದ್ ಕೇಜ್ರಿವಾಲ್
ನವದೆಹಲಿ, ಮೇ 21: "ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಸಾವನ್ನು ಬಯಸಿದ್ದಾರೆ" ಎನ್ನುವ ಮೂಲಕ ಹೊಸ ವಿವಾದಕ್ಕೆ ದೆಹಲಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ನಾಂದಿ ಹಾಡಿದ್ದಾರೆ.
ಇತ್ತೀಚೆಗಷ್ಟೇ, ತಮ್ಮ ಭದ್ರತಾ ಸಿಬ್ಬಂದಿಯೇ ತಮ್ಮನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಕೇಜ್ರಿವಾಲ್ ಮಾತು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ವಿಜಯ್ ಗೋಯಲ್, "ನಿಮ್ಮ ಖಾಸಗಿ ಭದ್ರತಅ ಅಧಿಕಾರಿಯ ಮೇಲೆಯೇ ನಿಮಗೆ ನಂಬಿಕೆ ಇಲ್ಲದಿರುವುದನ್ನು ನೋಡಿ ನನಗೆ ಬೇಸರವಾಯಿತು. ನೀವು ದೆಹಲಿ ಪೊಲೀಸರಿಗೆ ಕೆಟ್ಟ ಹೆಸರು ಕೊಟ್ಟಿದ್ದೀರಾ. ನಿಮ್ಮ ಖಾಸಗಿ ಭದ್ರತಾ ಅಧಿಕಾರಿಯನ್ನು ನೀವೇ ಆರಿಸಿಕೊಳ್ಳಿ. ಸಹಾಯ ಬೇಕಿದ್ದರೆ ಕೇಳಿ, ದೀರ್ಘಕಾಲ ಬದುಕಿ" ಎಂದು ಟ್ವೀಟ್ ಮಾಡಿದ್ದರು.
ಇಂದಿರಾ ಗಾಂಧಿ ರೀತಿ ನನ್ನನ್ನೂ ಹತ್ಯೆ ಮಾಡುತ್ತಾರೆ: ಕೇಜ್ರಿವಾಲ್
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, "ವಿಜಯ್ ಜೀ, ನನ್ನ ಖಾಸಗಿ ಭದ್ರತಾ ಅಧಿಕಾರಿಯಲ್ಲ, ಆದರೆ ನನ್ನ ಸಾವನ್ನು ಬಯಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ" ಎಂದು ಪ್ರತಿಕ್ರಿಯೆ ನೀಡಿದ್ದರು.
ಕೇಜ್ರಿವಾಲ್ ಗೆ ಇಂದಿರಾಗಾಂಧಿಯಂತೆ ಹತ್ಯೆಯ ಭೀತಿ ಏಕೆ?
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, "ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದಂತೆಯೇ ನನ್ನನ್ನೂ ಹತ್ಯೆ ಮಾಡಲಾಗುತ್ತದೆ. ನನ್ನ ಖಾಸಗಿ ಭದ್ರತಾ ಅಧಿಕಾರಿ ಬಿಜೆಪಿಗೆ ಮಾಹಿತಿ ನೀಡುತ್ತಾರೆ. ಅವರು ನನ್ನನ್ನು ಅಂಗರಕ್ಷಕರ ಮೂಲಕ ಒಂದು ದಿನ ಇಂದಿರಾ ಗಾಂಧಿ ಅವರನ್ನು ಕೊಂದಂತೆಯೇ ಕೊಲೆ ಮಾಡುತ್ತಾರೆ" ಎಂದು ಕೇಜ್ರಿವಾಲ್ ಹೇಳಿದ್ದರು.