ಬಿಹಾರ ಚುನಾವಣೆ ಗೆಲ್ಲಲು 'ಗಾಲ್ವಾನ್' ಯೋಧರ ಶೌರ್ಯ ಬಳಸಿದ ಮೋದಿ?
ದೆಹಲಿ, ಜೂನ್ 27: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಭಾರತೀಯ ಸೇನೆಯ ಶೌರ್ಯವನ್ನು ಪ್ರಧಾನಿ ಮೋದಿ ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವ ಸೇನಾ ಪಕ್ಷ ಆರೋಪಿಸಿದೆ.
Recommended Video
ಚೀನಾ ಮತ್ತು ಭಾರತ ಘರ್ಷಣೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದ ಮೋದಿ ಕೇವಲ ಒಂದು ಸಮುದಾಯದ ಸೈನಿಕರನ್ನು ಹೊಗಳಿದ್ದರು. ಈ ಮೂಲಕ ಬಿಹಾರ್ ಚುನಾವಣೆಯಲ್ಲಿ ಓಲೈಕೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಶಿವಸೇನಾ ದೂರಿದೆ.
ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಯೋಧರ ಹೆಸರು, ಊರು
ಜೂನ್ 14 ರಂದು ಲಡಾಖ್ನ ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಮುಖಾಮುಖಿಯಲ್ಲಿ ಭಾರತದ 20 ಯೋಧರ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ ಐದು ಯೋಧರು ಬಿಹಾರ, ನಾಲ್ಕು ಯೋಧರು ಪಂಜಾಬ್, ಇಬ್ಬರು ಝಾರ್ಖಂಡ್ ಯೋಧರು ಒಳಗೊಂಡಿದ್ದರು.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸುವ ವೇಳೆ ನರೇಂದ್ರ ಮೋದಿ ವಿಶೇಷವಾಗಿ ಬಿಹಾರ್ ಯೋಧರನ್ನು ಉಲ್ಲೇಖಿಸಿದ್ದರು. ಲಡಾಖ್ ಘಟನೆಯಲ್ಲಿ ನಿರ್ದಿಷ್ಟ ಸೇನೆ ರೆಜಿಮೆಂಟ್ನ ಪಾತ್ರವನ್ನು ಉಲ್ಲೇಖಿಸಿದ ಮೋದಿ 'ಜಾತಿ ಮತ್ತು ಪ್ರಾದೇಶಿಕತೆ'ಯನ್ನು ಎತ್ತಿ ತೋರಿಸಿದ್ದಾರೆ ಎಂದು ಶಿವಸೇನಾ ಟೀಕಿಸಿದೆ.
ಅಂದು ಮೋದಿ ಏನು ಹೇಳಿದ್ದರು?
ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್ ಯೋಜನೆ ಉದ್ಘಾಟನೆ ಮಾಡಿದ್ದ ಮೋದಿ ''ಲಡಾಖ್ನಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ಧೈರ್ಯಶಾಲಿಗಳ ಬಗ್ಗೆ ದೇಶ ಹೆಮ್ಮೆ ಪಡುತ್ತದೆ. ಇಂದು ನಾನು ಬಿಹಾರದ ಜನರೊಂದಿಗೆ ಮಾತನಾಡುವಾಗ, ಪ್ರತಿ ಬಿಹಾರಿಯು ಬಿಹಾರ ರೆಜಿಮೆಂಟ್ನ ಶೌರ್ಯದ ಬಗ್ಗೆ ಹೆಮ್ಮೆಪಡುತ್ತದೆ ಎಂದು ನಾನು ಹೇಳುತ್ತೇನೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೈರ್ಯಶಾಲಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ'' ಎಂದಿದ್ದರು.
ಈ ವಿಷಯ ಕುರಿತಾಗಿ ಶಿವಸೇನಾ ಪಕ್ಷದ ದೈನಂದಿನ ಮುಖವಾಣಿ ವರದಿ ಪ್ರಕಟ ಮಾಡಿದ್ದು ''ದೇಶವು ತನ್ನ ಗಡಿಯಲ್ಲಿ ಬಿಕ್ಕಟ್ಟನ್ನು ಎದುರಿಸಿದಾಗ, ಮಹರ್, ಮರಾಠಾ, ರಜಪೂತ್, ಸಿಖ್, ಗೂರ್ಖಾ, ಡೋಗ್ರಾ ರೆಜಿಮೆಂಟ್ಗಳು ಸುಮ್ಮನೆ ಕುಳಿತು ಗಡಿಯಲ್ಲಿ ತಂಬಾಕು ಬೆರೆಸಿ ಅಥವಾ ಅಗಿಯುತ್ತಿದ್ದವು? ಮೋದಿ ಅವರ ಇಂತಹ ರಾಜಕೀಯ ಕೊರೊನಾ ವೈರಸ್ಗಿಂತ ಅಪಾಯ'' ಎಂದು ಹೇಳಿತ್ತು.
ಈ ವರ್ಷದ ಅಂತ್ಯದಲ್ಲಿ ಬಿಹಾರ್ ಚುನಾವಣೆ ನಡೆಯಲಿದೆ.