ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದಿರಿ: ಮೋದಿ
ನವದೆಹಲಿ, ಆಗಸ್ಟ್ 29: ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಗಳ ಮೇಲೆ ಕಣ್ಣಿಟ್ಟಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು, ಅಥವಾ ಕೊಳಕು ಸುದ್ದಿಯನ್ನು ಹರಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ.
'2019 ರ ಲೋಕಸಭಾ ಚುನಾವಣೆಗೆ ಸಾಮಾಜಿಕ ಮಾಧ್ಯಮವನ್ನು ಭೂಮಿಕೆಯನ್ನಾಗಿ ಬಳಸಿಕೊಳ್ಳಿ. ಆದರೆ ಇವುಗಳಲ್ಲಿ ಹರಿಯುವ ಸುಳ್ಳು ಸುದ್ದಿಯ ಬಗ್ಗೆ ಗಮನವಿರಲಿ' ಎಂದು ಅವರು ಕಿವಿಮಾತು ಹೇಳಿದರು.
ಮೋದಿ ಪುನರಾಯ್ಕೆ ಸಾಧ್ಯತೆ ಶೇ 50 ಮಾತ್ರ! ಹಾಗಿದ್ದರೆ ಬದಲಾಗಿದ್ದೇನು?
ನಮೋ app ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಮೋದಿ, 'ಸಾಮಾಜಿಕ ಮಾಧ್ಯಮಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಿ. ಸರ್ಕಾರದ ಸಾಧನೆಗಳ ಬಗ್ಗೆ ತಿಳಿಹೇಳಿ' ಎಂದರು.
'ಇತ್ತೀಚೆಗೆ ಒಂದು ಸುದ್ದಿಯನ್ನು ತಪ್ಪೋ, ಸರಿಯೋ ಎಂದು ಪರೀಕ್ಷಿಸದೆ ಫಾರ್ವರ್ಡ್ ಮಾಡುವುದು ಹೆಚ್ಚಾಗಿದೆ. ಇದರಿಂದಾಗಿ ಸಮಾಜಕ್ಕೆ ಹಾನಿಯಾಗುವಂಥ ಘಟನೆಗಳು ನಡೆಯುತ್ತಿವೆ' ಎಂಮದು ಅವರು ಕಳವಳ ವ್ಯಕ್ತಪಡಿಸಿದರು.
2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿರುಸಿನ ತಯಾರಿ ನಡೆಸುತ್ತಿರುವ ಬಿಜೆಪಿ, ಆ.28 ರದು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿತ್ತು. ಇದೀಗ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಮಾತನಾಡಿ, ಚುನಾವಣೆಗೆ ಸಿದ್ಧತೆ ನಡೆಸಲು ಮನವಿಮಾಡಿದ್ದಾರೆ.