ಸಂಸತ್ ಅಧಿವೇಶನದಲ್ಲಿ ಪ್ರಶ್ನೆ ಕೇಳಿ, ಗದ್ದಲ ಬೇಡ ಎಂದ ಪ್ರಧಾನಿ ಮೋದಿ
ನವದೆಹಲಿ, ನವೆಂಬರ್ 29: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ನಾವು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಮತ್ತು ಕಲಾಪಗಳ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಸಂಸತ್ ಚಳಿಗಾಲ ಅಧಿವೇಶನ ಆರಂಭಕ್ಕೂ ಮುನ್ನ ಅವರು ಮಾತನಾಡಿದರು. ಇದು ಸಂಸತ್ತಿನ ಮಹತ್ವದ ಅಧಿವೇಶನವಾಗಿದ್ದು, ದೇಶದ ನಾಗರಿಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜನರ ಉಜ್ವಲ ಭವಿಷ್ಯಕ್ಕಾಗಿ ಪ್ರತಿಪಕ್ಷಗಳು ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ಹೇಳಿದ್ದಾರೆ.
Parliament Winter Session Live :ಸಂಸತ್ತಿನಲ್ಲಿ ಸವಾಲುಗಳೂ ಇರಲಿ, ಶಾಂತಿಯೂ ಇರಲಿ: ಮೋದಿ
ಹಿಂದೂಸ್ತಾನದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಆಜಾದಿ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಹಿತ, ಜನಹಿತಕ್ಕಾಗಿ ಸಾಮಾನ್ಯ ನಾಗರಿಕರು ಅನೇಕ ಕಾರ್ಯಕ್ರಮ ನಡೆಸುತ್ತಿದ್ದು, ಸ್ವಾತಂತ್ರ್ಯದ ಕನಸು ಕಂಡಿದ್ದರೋ ಅದನ್ನು ನನಸು ಮಾಡಲು ಜನರು ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರಗತಿಗಾಗಿ ಹೊಸ ಉಪಾಯಗಳನ್ನು ಮಾಡಬೇಕಿದೆ, ಹೊಸ ದಾರಿಗಳನ್ನು ಹುಡುಕಬೇಕಿದೆ. ದೂರಗಾಮಿ ಸಕಾರಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಮೋದಿ ಹೇಳಿದ್ದಾರೆ.
ಸಂಸತ್ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ನಡೆದುಕೊಳ್ಳಿ:
ಸಂಸತ್ ಚಳಿಗಾಲ ಅಧಿವೇಶನದಲ್ಲಿ ಸರ್ಕಾರವು ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿದೆ. ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಎಷ್ಟು ಬೇಕಾದರೂ ಧ್ವನಿ ಎತ್ತಿ, ಆದರೆ ಸಭಾಪತಿ ಹಾಗೂ ಸಂಸತ್ತಿನ ಗೌರವವನ್ನು ಕಾಪಾಡಿ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.
ಸಂಸತ್ತು ಎಷ್ಟು ದಿನ ನಡೆದಿತ್ತು, ಯಾರ್ಯಾರು ಅಧಿವೇಶನ ತಡೆಯಲು ಪ್ರಯತ್ನಿಸಿದ್ದರು ಎಂಬುದು ಭವಿಷ್ಯದಲ್ಲಿ ನೆನಪಿರಬಾರದು. ಅದರ ಬದಲಿಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಏನೇನು ಸಕಾರಾತ್ಮಕ ನಿರ್ಣಯವನ್ನು ಕೈಗೊಂಡಿದೆ ಎಂಬುದನ್ನು ಜನರು ನೆನಪಿಟ್ಟುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಬಗ್ಗೆ ಎಚ್ಚರಿಕೆ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮೊದಲಿನಷ್ಟಿಲ್ಲ. ಆದರೆ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಜನರು ಜಾಗೃತಿ ವಹಿಸಬೇಕು. ರೋಗ ಹರಡದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.