ಗಾಲ್ವಾನ್ ಸಂಘರ್ಷದ ಕುರಿತು ರಾಷ್ಟ್ರಪತಿಗೆ ಪ್ರಧಾನಿ ಮಾಹಿತಿ
ನವದೆಹಲಿ, ಜುಲೈ.03: ಭಾರತ ಗಡಿ ಪ್ರದೇಶ ಲಡಾಖ್ ಗೆ ಭೇಟಿ ನೀಡಿ ಯೋಧರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿ ಮಾಡಿದರು.
ನವದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿದ ಪ್ರಧಾನಿ ಮೋದಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸನ್ನಿವೇಶ ಮತ್ತು ಸಮಸ್ಯೆಗಳ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜೊತೆಗೆ ಚರ್ಚೆ ನಡೆಸಿದರು.
ಪ್ರಧಾನಿ ಭೇಟಿ ಮಾಡಿದ ನಿಮು ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?
ಜುಲೈ.03ರ ಶುಕ್ರವಾರ ಲಡಾಖ್ ನ ಲೇಹ್ ಜಿಲ್ಲೆಯ ನಿಮು ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಗಾಲ್ವಾನ್ ನದಿ ಕಣಿವೆಯಲ್ಲಿ ಹೋರಾಟ ನಡೆಸಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೌರವ ಮತ್ತು ಹೆಮ್ಮೆಯಿದೆ ಎಂದು ಮೋದಿ ತಿಳಿಸಿದ್ದರು.
ಗಾಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಚರ್ಚೆ
ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ನಡೆದ ಸಂಘರ್ಷ ಹಾಗೂ ಅದರ ಸುತ್ತಮುತ್ತಲಿನಲ್ಲಿ ನಡೆದ ಚರ್ಚೆಗಳ ಬಗ್ಗೆ ಉಭಯ ನಾಯಕರು ಮಾಕುಕತೆ ನಡೆಸಿದರು. ಲಡಾಖ್ ನಲ್ಲಿರುವ ಸನ್ನಿವೇಶ, ಯೋಧರ ಆರೋಗ್ಯ ಸ್ಥಿತಿ ಹಾಗೂ ಗಡಿಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಾಹಿತಿ ನೀಡಿದರು ಎಂದು ಹೇಳಲಾಗುತ್ತಿದೆ.
ಪ್ರಧಾನಮಂತ್ರಿ ಮೋದಿಯಿಂದ ಚೀನಾಗೆ ಎಚ್ಚರಿಕೆ ಸಂದೇಶ
ವಿಶ್ವದಲ್ಲಿ ವಿಕಾಸವಾದದ ಯುಗವು ಆರಂಭವಾಗಿದೆ. ವಿಸ್ತಾರವಾದಕ್ಕಿಂತ ವಿಕಾಸವಾದವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಆದರೆ ವಿಸ್ತಾರವಾದದಿಂದ ಇಡೀ ಜಗತ್ತಿಗೆ ಹಾಗೂ ಮಾನವೀಯತೆಗೆ ಸಾಕಷ್ಟು ಹಾಸಿಯುಂಟಾಗಿದೆ. ಭಾರತಕ್ಕೆ ಮಾನವನ ಜೀವನ ಮತ್ತು ಶಾಂತಿ, ಸ್ನೇಹ, ಸೌಹಾರ್ದತೆಯೇ ಅಗತ್ಯವಾಗಿದೆ. ವಿಸ್ತಾರವಾದವು ಯಾರಿಗೂ ಉತ್ತಮವಲ್ಲ ಎನ್ನುವ ಮೂಲಕ ಚೀನಾಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ
ಭಾರತೀಯ ಯೋಧರಿಗೆ ಸಲಾಂ ಎಂದಿದ್ದ ಮೋದಿ
ಭಾರತ ಮಾತೆಯ ಮಣ್ಣಿನ ಶಕ್ತಿ ಎಂಥದ್ದು ಎಂಬುದು ಶತ್ರುಗಳಿಗೆ ತಿಳಿದಿರಲಿಲ್ಲ. ನಮ್ಮ ಯೋಧರ ಶೌರ್ಯ ಹೇಗಿದೆ ಎನ್ನುವುದನ್ನು ಅರಿತುಗೊಳ್ಳದೇ ಗಡಿಯಲ್ಲಿ ಕಾಲ್ಕೆರೆದು ನಿಂತವರಿಗೆ ತಕ್ಕ ಪಾಠ ಕಲಿಸಿದ್ದೀರಿ. ಶತ್ರುಗಳಿಗೆ ಭಾರತೀಯ ಯೋಧರ ಶೌರ್ಯ ಏನು. ಭಾರತ ಮಾತೆಯ ಮಣ್ಣಿನ ಗುಣ ಎಂಥದ್ದು ಎಂಬುದರ ಅರಿವಾಗಿದೆ. ನಿಮ್ಮ ಶೌರ್ಯ ಮತ್ತು ಸಮರ್ಪಣೆಗೆ ಸರಿಸಾಟಿ ಇಲ್ಲ. ನಿಮ್ಮ ತೋಳುಗಳು ನಿಮ್ಮನ್ನು ಸುತ್ತುವರೆದಿರುವ ಪರ್ವತಗಳಂತೆ ಬಲವಾಗಿರುತ್ತವೆ. ನಿಮ್ಮ ಆತ್ಮವಿಶ್ವಾಸ, ದೃಢ ನಿಶ್ಚಯ ಮತ್ತು ನಂಬಿಕೆಯು ಇಲ್ಲಿರುವ ಶಿಖರಗಳಂತೆ ಸ್ಥಿರವಾಗಿವೆ. ಪ್ರತಿಯೊಬ್ಬ ಭಾರತೀಯರು ಕೂಡಾ ನಿಮ್ಮ ಬಗ್ಗೆ ಗೌರವ ಮತ್ತು ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಯೋಧರನ್ನು ಹಾಡಿ ಹೊಗಳಿದ್ದರು.
53 ವರ್ಷಗಳಲ್ಲ ಮೊದಲ ಬಾರಿ ಗಾಲ್ವಾನ್ ನಲ್ಲಿ ಗಾಂಚಾಲಿ
ಕಳೆದ 53 ವರ್ಷಗಳ ನಂತರದಲ್ಲೇ ಮೊದಲ ಬಾರಿಗೆ ಗಾಲ್ವಾನ್ ಕಣಿವೆ ವಿಚಾರಕ್ಕೆ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಬದಲಿಗೆ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು.