ರಾಜ್ಯಸಭೆ ಗಣರಾಜ್ಯದ ಆತ್ಮದಂತೆ: ಪ್ರಧಾನಿ ಮೋದಿ
ನವದೆಹಲಿ, ನವೆಂಬರ್ 18: ರಾಜ್ಯಸಭೆಯ ಭಾಗವಾಗುವುದು ಹೆಮ್ಮೆಯ ಸಂಗತಿ. ರಾಜ್ಯಸಭೆಯ 250ನೇ ಅಧಿವೇಶನದ ವೇಳೆ ಇಲ್ಲಿ ಇರಲು ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ಲೋಕಸಭೆ ಕೆಳಮನೆಯಾಗಿ ನೆಲದ ಮೇಲಿದೆ. ಆದರೆ ರಾಜ್ಯಸಭೆಯನ್ನು ಅದರಾಚೆ ಮತ್ತು ದೂರದವರೆಗೆ ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೋಮವಾರ ಆರಂಭವಾದ ಸಂಸತ್ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮೇಲ್ಮನೆಯು ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದು ಇತಿಹಾಸವನ್ನು ಕೂಡ ಸೃಷ್ಟಿಸಿದೆ. ಇತಿಹಾಸ ನಿರ್ಮಾಣವಾಗುತ್ತಿರುವುದು ನೋಡಿದೆ. ಇದು ಬಹಳ ದೂರದೃಷ್ಟಿಯುಳ್ಳ ಸದನ ಎಂದರು.
ಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳು
ರಾಜ್ಯಸಭೆಯು ಶಾಶ್ವತ ಭಾಗ ಎಂದ ಅವರು, ರಾಜ್ಯಸಭೆಯು ಭಾರತದ ಸಂಯುಕ್ತ ರಚನೆಯ ಆತ್ಮವಿದ್ದಂತೆ. ಅದು ಎಂದಿಗೂ ಕಳೆದುಹೋಗುವುದಿಲ್ಲ.
ರಾಜ್ಯಸಭೆಯು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದ ಜನರು ದೇಶಕ್ಕೆ ಕೊಡುಗೆ ನೀಡಲು ಮತ್ತು ಅಭಿವೃದ್ಧಿ ನಡೆಸಲು ಅವಕಾಶ ನೀಡುತ್ತದೆ. ಯಾವುದೇ ಚುನಾವಣೆಗಳನ್ನು ಎದುರಿಸದೆಯೇ ತಮ್ಮ ನಿರ್ದಿಷ್ಟ ವೃತ್ತಿಗಳನ್ನು ಪ್ರತಿನಿಧಿಸುವ ಜ್ಞಾನಿಗಳ ಅನುಭವಗಳ ಮೌಲ್ಯವನ್ನು ಪಡೆದುಕೊಳ್ಳುವ ಜಾಗ ರಾಜ್ಯಸಭೆ ಎಂದರು.
ಚಳಿಗಾಲ ಅಧಿವೇಶನಕ್ಕೂ ಮೊದಲೇ 'ನಮೋ' ಸಂದೇಶ!
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಸಿಲುಕಿಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ ಕಾನೂನು ಮಾಡುವಂತೆ ಈ ಸದನದ ಪ್ರೌಢಿಮೆ ನೋಡಿಕೊಂಡಿತು. ಅದೇ ರೀತಿ ಸೆಕ್ಷನ್ 370 ಮತ್ತು ಜಿಎಸ್ಟಿಗಳಲ್ಲಿಯೂ ನಡೆಯಿತು. ನಾವಿಲ್ಲಿ ರಾಜ್ಯಗಳು ಹಾಗೂ ಕೇಂದ್ರ ಒಟ್ಟಾಗಿ ಕೆಲಸ ಮಾಡುವುದನ್ನು ಬಯಸುತ್ತೇವೆ. ದೇಶವನ್ನು ಮುನ್ನಡೆಸುವ ಕಾರ್ಯದಲ್ಲಿ ಅವರು ಸ್ಪರ್ಧಿಗಳಲ್ಲ ಎಂದು ಹೇಳಿದರು.
ರಾಜ್ಯಸಭೆಯು ಎರಡನೆಯ ಮನೆಯೇ ಹೊರತು ಅಧೀನದ ಸದನವಲ್ಲ. ವಾಸ್ತವವಾಗಿ ಅದು ಬೆಂಬಲದ ಸದನವಾಗಿ ಕಾರ್ಯನಿರ್ವಹಿಸಬೇಕು ಎಂದರು.