ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವದ ಚರ್ಚೆಯಾಗಬೇಕು: ಮೋದಿ
ನವದೆಹಲಿ, ಅಕ್ಟೋಬರ್ 28: "ರಾಜಕೀಯ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಯಾಗಬೇಕು. ನಿಜವಾದ ಪ್ರಜಾಪ್ರಭುತ್ವದ ಸ್ಫೂರ್ತಿಯಿದು. ದೇಶದ ಅಭಿವೃದ್ಧಿಗೆ ಇದು ಅಗತ್ಯ" ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ 'ದೀಪಾವಳಿ ಮಿಲನ್' ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಬಗ್ಗೆ ಚರ್ಚೆಗಳಾಗುತ್ತವೆ. ಆದರೆ ಪಕ್ಷಗಳ ಮೌಲ್ಯಗಳು, ಆಂತರಿಕ ಪ್ರಜಾಪ್ರಭುತ್ವ ಮತ್ತು ಹೊಸ ತಲೆಮಾರಿನ ನಾಯಕರಿಗೆ ಹೇಗೆ ಅವಕಾಶ ನೀಡಲಾಗುತ್ತಿದೆ ಎಂಬ ಬಗ್ಗೆ ಚರ್ಚೆಯೇ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಅ.29ರಂದು ನರೇಂದ್ರ ಮೋದಿ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಗೈರು
ರಾಜಕೀಯ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಈ ದೇಶದಲ್ಲಿ ಅಂಥ ಜಾಗೃತಿಯೇ ಇಲ್ಲ. ಈ ಬಗ್ಗೆ ಮಾಧ್ಯಮಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಮೌಲ್ಯಗಳು ರಾಜಕೀಯ ಪಕ್ಷಗಳ ಭಾಗವಾಗಿದೆಯಾ ಅನ್ನೋದು ವ್ಯಾಪಕವಾಗಿ ಚರ್ಚೆಯಾಗಬೇಕು. ಮೊದಲಿಗೆ ರಾಜಕೀಯ ಪಕ್ಷಗಳೊಳಗೆ ಪ್ರಜಾಪ್ರಭುತ್ವ ಮೌಲ್ಯಗಳು ಬೆಳೆಯಬೇಕು. ಇದರಿಂದ ದೇಶದ ಭವಿಷ್ಯಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೂ ಒಳ್ಳೆಯದು ಎಂದು ಅವರು ಹೇಳಿದರು.
ಮೋದಿ ತಮ್ಮ ಭಾಷಣದಲ್ಲಿ ಯಾವುದೇ ವಿರೋಧ ಪಕ್ಷಗಳ ಪ್ರಸ್ತಾವ ಮಾಡದಿದ್ದರೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಗಾದಿಗೆ ತರುವ ಬಗ್ಗೆ ಬಂದಿರುವ ವರದಿ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.