'ರಫೇಲ್ ಬಗ್ಗೆ ಸಂಸತ್ ನಲ್ಲಿ ಉತ್ತರ ನೀಡುವ ಧೈರ್ಯ ಪ್ರಧಾನಿಗೆ ಇಲ್ಲ'
ನವದೆಹಲಿ, ಜನವರಿ 2: "ಪ್ರಧಾನಿಗೆ ಸಂಸತ್ ಗೆ ಬಂದು ರಫೇಲ್ ವಿಚಾರವಾಗಿ ಉತ್ತರ ನೀಡಲು ಧೈರ್ಯ ಇಲ್ಲ" ಎಂದು ಆರೋಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸದನದಲ್ಲಿ ಎಐಎಡಿಎಂಕೆ ಸದಸ್ಯರ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವಿತಿಟ್ಟುಕೊಂಡಿದ್ದಾರೆ ಎಂದಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಬಗೆಗಿನ ಕಡಿತ ತಮ್ಮ ಮಲಗುವ ಕೋಣೆಯಲ್ಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಹೇಳಿದ್ದಾರೆ ಎನ್ನಲಾದ ಆಡಿಯೋ ಟೇಪ್ ಕೇಳಿಸಲು ಅನುಮತಿ ನೀಡಬೇಕು ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.
ಮೋದಿಗೆ ಬಿಜೆಪಿ ಕಾರ್ಯಕರ್ತರಿಂದ ಮುಜುಗರ, ವ್ಯಂಗ್ಯವಾಡಿದ ರಾಹುಲ್
ಆ ಟೇಪ್ ನ ಅಸಲಿತನಕ್ಕೆ ನೀವು ಖಾತ್ರಿ ನೀಡುತ್ತೀರಾ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೆ ಮಾಡಿದರು. ಆಡಿಯೋ ಟೇಪ್ ಬಗ್ಗೆ ಮನೋಹರ್ ಪರಿಕರ್ ಟ್ವೀಟ್ ಮಾಡಿ, ವಾಸ್ತವವನ್ನು ತಿರುಚುವ ಪ್ರಯತ್ನವಿದು ಎಂದಿದ್ದಾರೆ. ಆ ಆಡಿಯೋದಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಚಿವ ವಿಶ್ವಜಿತ್ ರಾಣೆ ಕೂಡ, ಆ ಟೇಪ್ ತಿರುಚಲಾಗಿದೆ. ಪರಿಕರ್ ರಫೇಲ್ ಬಗ್ಗೆ ಮಾತನಾಡಿಯೇ ಇಲ್ಲ ಎಂದಿದ್ದಾರೆ.
ಭಾರತ ಹಾಗೂ ಫ್ರಾನ್ಸ್ ಮಧ್ಯೆ ಮೂವತ್ತಾರು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಆದಾಗ ಮನೋಹರ್ ಪರಿಕರ್ ಅವರು ದೇಶದ ರಕ್ಷಣಾ ಸಚಿವರಾಗಿದ್ದರು. ಸದ್ಯಕ್ಕೆ ಪರಿಕರ್ ಗೋವಾದ ಮುಖ್ಯಮಂತ್ರಿ. ಇತ್ತೀಚಿನ ತಿಂಗಳಲ್ಲಿ ಗಂಭೀರವಾದ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ.
ರೈತರಿಗೆ ಸುಳ್ಳು ಹೇಳಬೇಡಿ: ರಾಹುಲ್ ಗಾಂಧಿಗೆ ಮೋದಿ ಸಲಹೆ
"ರಫೇಲ್ ನ ವ್ಯವಹಾರದ ಎಲ್ಲ ಕಾಗದ ಪತ್ರಗಳು ನನ್ನ ಫ್ಲ್ಯಾಟ್ ನ ಮಲಗುವ ಕೋಣೆಯಲ್ಲಿವೆ". ಆದ್ದರಿಂದ ಯಾರೂ ನನ್ನನ್ನು ಪದವಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಗೋವಾ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂಬುದಾಗಿ ಕಾಂಗ್ರೆಸ್ ಹೇಳಿದೆ. ಈ ಆಡಿಯೋ ಟೇಪ್ ನಲ್ಲಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಧ್ವನಿ ಕೂಡ ಇದೆ ಎನ್ನಲಾಗಿದೆ. ಸಂಸತ್ ನಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಚರ್ಚೆ ಆಗುವ ಮುನ್ನ ಕಾಂಗ್ರೆಸ್ ವಕ್ತಾರರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.