'ನಕಲಿ ಪ್ರಕರಣಗಳಿಗೆ ಪ್ರಧಾನಿ, ಗೃಹ ಸಚಿವರು ಕ್ಷಮೆಯಾಚಿಸಬೇಕು': ಎಎಪಿ ನಾಯಕ
ನವದೆಹಲಿ, ಸೆ.19: ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷವು ಸುದ್ದಿಗೋಷ್ಠಿಗಳಲ್ಲಿ ಪರಸ್ಪರ ವಾಕ್ಸಮರ ನಡೆಸುವುದನ್ನು ಮುಂದುವರೆಸಿವೆ. ಎಎಪಿ ಸಂಸದ ಸಂಜಯ್ ಸಿಂಗ್ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷ ಭಾನುವಾರ ದೆಹಲಿಯಲ್ಲಿ ಮೊದಲ ರಾಷ್ಟ್ರೀಯ ಜನಪ್ರತಿನಿಧಿ ಸಮಾವೇಶವನ್ನು ಆಯೋಜಿಸಿದೆ. ಇದರಿಂದಾಗಿ ಬಿಜೆಪಿ ಚುನಾಯಿತ ಪ್ರತಿನಿಧಿಗಳ 'ಬೃಹತ್' ಮೊದಲ ರಾಷ್ಟ್ರೀಯ ಸಮ್ಮೇಳನದ ನಂತರ ತಲ್ಲಣಗೊಂಡಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ಸೋಮವಾರದೊಳಗೆ ನನ್ನ ಬಂಧಿಸಿ, ಇಲ್ಲ ಪ್ರಧಾನಿ ಕ್ಷಮೆ ಕೇಳಲಿ: ಮನೀಶ್ ಸಿಸೋಡಿಯಾ
ಭಾನುವಾರ ಬೆಳಗ್ಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಗುಜರಾತ್ನಲ್ಲಿ ಆಪ್ಗೆ ಜನಬೆಂಬಲವಿರುವ ಕಾರಣ ಬಿಜೆಪಿ ತನ್ನ ಪಕ್ಷವನ್ನು 'ಒಡೆಯಲು' ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಕ್ಷ ಬದಲಾಯಿಸಲು ಶಾಸಕರಿಗೆ 20-25 ಕೋಟಿ ರೂ ಆಮಿಷ
ಬಿಜೆಪಿಯು ದೇಶಾದ್ಯಂತ 285 ಶಾಸಕರನ್ನು ಅಪಹರಿಸಿದೆ ಮತ್ತು ಖರೀದಿಸಿದೆ ಎಂದು ಸಂಸದ ಸಂಜಯ್ ಸಿಂಗ್ ಹೇಳಿದರು. ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬುದು ಇಡೀ ದೇಶವೇ ತಿಳಿಯಬೇಕಿದೆ ಎಂದ ಅವರು, ಇಂದು ಬಿಜೆಪಿ ಹೆಸರನ್ನು ಭಾರತೀಯ ಖೋಕಾ (ಕೋಟಿ) ಪಕ್ಷ ಎಂದು ಬದಲಾಯಿಸಲಾಗಿದೆ ಎಂದಿದ್ದಾರೆ.
ಇನ್ನು ಪಕ್ಷ ಬದಲಾಯಿಸಲು ತಮ್ಮ ಶಾಸಕರಿಗೆ 20-25 ಕೋಟಿ ನೀಡುವ ಮೂಲಕ ದೆಹಲಿಯಲ್ಲಿ ಬಿಜೆಪಿ 'ಆಪರೇಷನ್ ಕಮಲ'ವನ್ನು ನಡೆಸುತ್ತಿದೆ. ಇದು ವಿಫಲವಾಗಿದೆ' ಎಂದು ಆಮ್ ಆದ್ಮಿ ಪಕ್ಷದ ಆರೋಪವನ್ನು ಮತ್ತೆ ಪುನರುಚ್ಚರಿಸಿದರು.
ಪ್ರಧಾನಿ ಮತ್ತು ಗೃಹ ಸಚಿವರು ಕ್ಷಮೆಯಾಚಿಸಬೇಕು
ಬಿಜೆಪಿಯು ಮೊದಲಿನಿಂದಲೂ ಎಎಪಿ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಲೇ ಇತ್ತು. ಹೀಗಾಗಿ ತಮ್ಮ ಪಕ್ಷದ ಸಚಿವರು ಮತ್ತು ಶಾಸಕರ ವಿರುದ್ಧ 169 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಸದ ಸಿಂಗ್ ಹೇಳಿದ್ದಾರೆ. ಆದರೆ, ಈ ನಕಲಿ ಪ್ರಕರಣಗಳ ಪೈಕಿ 133 ರಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದರು.
ಈ 'ನಕಲಿ ಪ್ರಕರಣ'ಗಳನ್ನು ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಸಂಸದ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಕಾರ್ಪೊರೇಟ್ ಸಾಲ ಮನ್ನಾಕ್ಕೆ ಎಷ್ಟು ಕೋಟಿ ಹಣ ಪಡೆದಿದೆ ಬಿಜೆಪಿ?
ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡಿರುವ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಬಿಜೆಪಿ ಬಂಡವಾಳಶಾಹಿಗಳ 10 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ. ಈ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಅವರು ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ನಾನು ಸಂಬಿತ್ ಪಾತ್ರಾ ಅವರ ಪಕ್ಷವನ್ನು ಕೇಳಲು ಬಯಸುತ್ತೇನೆ ಎಂದು ಆಪ್ ಸಂಸದ ಹೇಳಿದರು.
ಇನ್ನು, ಅರವಿಂದ್ ಕೇಜ್ರಿವಾಲ್ ಅವರನ್ನು ತುಘಲಕ್ ಎಂದು ಕರೆದಿರುವ ಬಿಜೆಪಿ ವಿರುದ್ಧ ಸಂಜಯ್ ಸಿಂಗ್ ಅವರು ರಾಜಕೀಯದಲ್ಲಿ ಇಂತಹ ಭಾಷೆಯ ಬಳಕೆಯನ್ನು ಖಂಡಿಸಿದರು.
"ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಬಿಜೆಪಿ ನಾಯಕರು ಭಯೋತ್ಪಾದಕ ಎಂದು ಕರೆದರು, ಪಂಜಾಬ್ ಚುನಾವಣೆಯಲ್ಲಿ ಅವರನ್ನು ಖಲಿಸ್ತಾನಿ ಎಂದು ಕರೆದರು. ಅಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿತು. ಈ ರೀತಿಯ ಭಾಷೆ ಬಳಸಬಾರದು ಎಂದಿದ್ದಾರೆ. y
ಸಿಬಿಐ ಸೋಮವಾರ ಬಂಧಿಸದಿದ್ದರೇ ಪ್ರಧಾನಿ ಕ್ಷಮೆ ಕೇಳಬೇಕು!
ಅಬಕಾರಿ ನೀತಿ ಹಗರಣದ ಸ್ಟಿಂಗ್ ಆಪರೇಷನ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸೋಮವಾರದೊಳಗೆ ಸಿಬಿಐ ನನ್ನನ್ನು ಬಂಧಿಸಬೇಕು. ಇಲ್ಲದಿದ್ದರೆ, ಪ್ರಧಾನಿ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, "ಸಿಬಿಐ ನನ್ನ ಮನೆ ಮೇಲೆ ದಾಳಿ ಮಾಡಿದೆ. ಆದರೆ, ಏನೂ ಸಿಕ್ಕಿಲ್ಲ. ಅವರು ನನ್ನ ಲಾಕರ್ ಅನ್ನು ಸಹ ಹುಡುಕಿದರು. ಆದರೆ, ಅಲ್ಲಿಯೂ ಏನೂ ಸಿಗಲಿಲ್ಲ. ಇದೀಗ ಬಿಜೆಪಿ ಈ ಸ್ಟಿಂಗ್ ಆಪರೇಷನ್ ಹೊರ ತಂದಿದೆ. ಈ ಬಗ್ಗೆಯೂ ಸಿಬಿಐ ಮತ್ತು ಇಡಿ ತನಿಖೆ ನಡೆಸಬೇಕು. ಈ ಆರೋಪ ಸರಿಯಾಗಿದ್ದರೆ ಸೋಮವಾರದೊಳಗೆ ನನ್ನನ್ನು ಬಂಧಿಸಬೇಕು. ಇಲ್ಲದಿದ್ದರೆ, ಸೋಮವಾರದೊಳಗೆ ಈ ನಕಲಿ ಸ್ಟಿಂಗ್ ಆಪರೇಷನ್ಗಾಗಿ ಪ್ರಧಾನಿ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.