ಪ್ರಧಾನಿಗೂ ಇಲ್ಲ ನೇತಾಜಿ ರಹಸ್ಯ ಹೇಳುವ ಅಧಿಕಾರ!
ನವದೆಹಲಿ, ಫೆ. 17: ಭಾರತೀಯರಲ್ಲಿ ರಕ್ತ ಕ್ರಾಂತಿಯ ಕಿಚ್ಚೆಬ್ಬಿಸಿದ್ದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಯಾವುದೇ ಇದ್ದರೂ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ಪ್ರಚಾರ ಸಂದರ್ಭ ಸುಭಾಷ್ಚಂದ್ರ ಬೋಸ್ ಕಣ್ಮರೆ ರಹಸ್ಯವನ್ನು ಬಯಲಿಗೆ ಎಳೆಯುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ಮಾತನಾಡದೆ ಸುಮ್ಮನುಳಿದಿದೆ.
"ನೇತಾಜಿ ನಿಗೂಢ ಕಣ್ಮರೆ ಕುರಿತು ಪ್ರಧಾನಿಯ ಅಧಿಕಾರವೇನು?" ಎಂದು ವ್ಯಕ್ತಿಯೊಬ್ಬರು ಮಾಹಿತಿ ಹಕ್ಕಿನಡಿ ಪ್ರಶ್ನೆ ಕೇಳಿದ್ದರು. "ಈ ಕುರಿತು ಇರುವ ರಹಸ್ಯ ಫೈಲ್ ಬಹಿರಂಗಪಡಿಸಲು ಪ್ರಧಾನ ಮಂತ್ರಿಗೆ ಯಾವುದೇ ಅಧಿಕಾರ ಇಲ್ಲ" ಎಂದು ಪ್ರಧಾನಿ ಕಚೇರಿ ಉತ್ತರ ನೀಡಿದೆ.
ತಿರುವನಂತಪುರಮ್ ಮೂಲದ ಐಟಿ ಉದ್ಯೋಗಿಯಾಗಿರುವ ಶ್ರೀಜಿತ್ ಪಣಿಕರ್ ಎಂಬುವರು ಮಾಹಿತಿ ಹಕ್ಕಿನಡಿ "ನೇತಾಜಿ ಅವರ ನಿಗೂಢ ಕಣ್ಮರೆಯನ್ನು ಬಹಿರಂಗಪಡಿಸುವ ಅಧಿಕಾರ ಪ್ರಧಾನ ಮಂತ್ರಿಗಳಿಗೆ ಇದೆಯೇ?" ಎಂದು ಕೇಳಿದ್ದರು.
ಕಳೆದ ವರ್ಷ ನವದೆಹಲಿ ಮೂಲದ ಸುಭಾಷ್ ಅಗರ್ವಾಲ್ ಎಂಬುವರು ನೇತಾಜಿ ನಿಗೂಢ ಕಣ್ಮರೆ ಕುರಿತು ಮಾಹಿತಿ ಹಕ್ಕಿನಡಿ ಪ್ರಶ್ನಿಸಿದ್ದರು. ಆಗ ಕೂಡ ಪ್ರಧಾನ ಮಂತ್ರಿ ಕಾರ್ಯಾಲಯವು "ಈ ವಿಷಯ ಬಹಿರಂಗಪಡಿಸಿದರೆ ವಿದೇಶಗಳೊಂದಿಗೆ ಹೊಂದಿರುವ ಸಂಬಂಧಕ್ಕೆ ಧಕ್ಕೆ ಉಂಟಾಗಬಹುದು" ಎಂದು ಪ್ರತಿಕ್ರಿಯಿಸಿತ್ತು.
ಏನಾಗಿತ್ತು? : ಸ್ವಾತಂತ್ರ್ಯ ಸಂಗ್ರಾಮ ಉಗ್ರವಾಗಿ ನಡೆಯುತ್ತಿದ್ದಾಗ ನೇತಾಜಿ ಸುಭಾಷ್ಚಂದ್ರ ಬೋಸ್ ಅವರನ್ನು ಬ್ರಿಟಿಷರು ಗೃಹಬಂಧನದಲ್ಲಿ ಇರಿಸಿದ್ದರು. 1941ರಲ್ಲಿ ಅಲ್ಲಿಂದ ತಪ್ಪಿಸಿಕೊಂಡ ನೇತಾಜಿ ಜಪಾನ್ ದೇಶದ ಸಹಾಯದೊಂದಿಗೆ ಭಾರತೀಯ ರಾಷ್ಟ್ರೀಯ ಸೇನೆ (Indian National Army) ಸಂಘಟಿಸಿದ್ದರು.
ಆದರೆ, 1945ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಸ್ವಾತಂತ್ರ್ಯಾ ನಂತರ ರಹಸ್ಯ ಪತ್ತೆಗೆ ಭಾರತ ಸರ್ಕಾರ ನೇಮಿಸಿದ್ದ ಮುಖರ್ಜಿ ಸಮಿತಿಯು "ಸುಭಾಷ್ಚಂದ್ರ ಬೋಸ್ ಅವರು ತೈವಾನ್ನ ತೈಹೋಕು ವಿಮಾನ ನಿಲ್ದಾಣದಲ್ಲಿ 1945ರ ಆಗಸ್ಟ್ 18ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ" ಎಂದು ವರದಿ ನೀಡಿತ್ತು.