ದೆಹಲಿ-ನೋಯ್ಜಾ ಗಡಿಯಿಂದ ರೈತರ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಮೊರೆ
ನವದೆಹಲಿ, ಡಿಸೆಂಬರ್.04: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ದೆಹಲಿ ಮತ್ತು ನೋಯ್ಡಾ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.
ನವದೆಹಲಿ ಮತ್ತು ನೋಯ್ಜಾ ಗಡಿ ಪ್ರದೇಶದಲ್ಲಿ ರೈತರ ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಇದರಿಂದ ಕೊವಿಡ್-19 ಸೋಂಕಿನ ಹರಡುವಿಕೆಯ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸರಕು ಸೇವೆಗಳ ಸ್ಥಳಾಂತರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಅರ್ಜಿದಾರ ವಕೀಲ ಓಂಪ್ರಕಾಶ್ ಪರಿಹಾರ್ ತಿಳಿಸಿದ್ದಾರೆ.
ಡಿಸೆಂಬರ್ 5ಕ್ಕೆ ರೈತರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ
ಶುಕ್ರವಾರ ನಾಲ್ಕನೇ ದಿನ ದೆಹಲಿ ಮತ್ತು ನೋಯ್ಡಾ ಗಡಿ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಸುಪ್ರೀಂಕೋರ್ಟ್ ಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ಏಕೆಂದರೆ ಉತ್ತರ ಪ್ರದೇಶ ಮತ್ತು ದೆಹಲಿಗೆ ಸಂಪರ್ಕಿಸುವ ರಸ್ತೆಗಳನ್ನು ಕೂಡಾ ಬಂದ್ ಮಾಡಲಾಗಿದೆ.
ನವದೆಹಲಿಯಲ್ಲಿ 9ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ:
ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಹಲವು ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದ್ದು, ಈ ಕುರಿತು ಸಂಚಾರಿ ಪೊಲೀಸರು ಮೊದಲೇ ಮಾಹಿತಿ ನೀಡಿದ್ದಾರೆ. ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಗೆ ಸಂಪರ್ಕಿಸುವ ಗಡಿ ಭಾಗದ ರಸ್ತೆಗಳಲ್ಲಿ ರೈತರ ಜಮಾಯಿಸಿದ್ದು, ಈ ಮಾರ್ಗದಲ್ಲಿ ವಾಹನ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಲಾಗಿದೆ. ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಘಜಿಯಾಬಾದ್ನಿಂದ ದೆಹಲಿಗೆ ಆಗಮಿಸುವ ಪ್ರಯಾಣಿಕರು ಘಾಜಿಪುರ ಗಡಿಯ ರಾಷ್ಟ್ರೀಯ ಹೆದ್ದಾರಿ 24ರ ಮಾರ್ಗವಾಗಿ ಅಪ್ಸರಾ, ಭೋಪ್ರಾ ಮಾರ್ಗವನ್ನು ಬಳಸಿಕೊಂಡು ಪ್ರಯಾಣಿಸುವಂತೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ. ಟಿಕ್ರಿ, ಝರೋಡಾ ಗಡಿಯಲ್ಲಿ ಎಲ್ಲ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬದುಸರೈ ಗಡಿ ಭಾಗದ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಂತ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.