ಮದುವೆ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುವುದು ಅತ್ಯಾಚಾರ: ಸುಪ್ರೀಂ
ನವದೆಹಲಿ, ಏಪ್ರಿಲ್ 15: ಮದುವೆ ಆಗುವ ಭರವಸೆ ನೀಡಿ, ಮಹಿಳೆ ಜತೆಗೆ ಲೈಂಗಿಕ ಸಂಪರ್ಕ ಬೆಳೆಸುವುದು ಅತ್ಯಾಚಾರ ಮತ್ತು ಮಹಿಳೆಯ ಗೌರವಕ್ಕೆ ಚ್ಯುತಿ ಮಾಡಿದಂತೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್, ಎಂ.ಆರ್. ಶಾ ಅವರನ್ನು ಒಳಗೊಂಡ ಪೀಠವು ಈಚೆಗೆ ನೀಡಿದ ತೀರ್ಪಿನಲ್ಲಿ, ಅತ್ಯಾಚಾರವು ಮಹಿಳೆಯ ಗೌರವ ಮತ್ತು ಘನತೆಗೆ ಕುಂದು ತರುವಂಥದ್ದು. ಒಂದು ವೇಳೆ ಅತ್ಯಾಚಾರ ಆರೋಪಿ ಹಾಗೂ ಸಂತ್ರಸ್ತೆ ಜೀವನದಲ್ಲಿ ನೆಲೆ ಕಂಡುಕೊಂಡಿದ್ದು, ತಮ್ಮ ಕುಟುಂಬದ ಕಾಳಜಿ ಮಾಡುತ್ತಿದ್ದಲ್ಲಿ ಆ ನೆಲೆಗಟ್ಟಿನ ಮೇಲೆ ಈ ಅಪರಾಧವನ್ನು ಮಾಫಿ ಮಾಡುವಂತಿಲ್ಲ ಎಂದಿತ್ತು.
ವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು
ಇದೇ ವೇಳೆ ಇಂಥ ಘಟನೆಗಳು ಆಧುನಿಕ ಸಮಾಜದಲ್ಲಿ ಹೆಚ್ಚಾಗುತ್ತಿವೆ ಎಂಬುದನ್ನು ಪ್ರಸ್ತಾಪಿಸಿತ್ತು. ಈ ತೀರ್ಪು ಬಂದಿರುವುದು ಛತ್ತೀಸ್ ಗಢ ಮೂಲದ ವೈದ್ಯರೊಬ್ಬರ ವಿರುದ್ಧ ಮಹಿಳೆ ದಾಖಲಿಸಿದ ಪ್ರಕರಣದಲ್ಲಿ. 2013ರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಮಾಡಿದ್ದರು.
ಆಕೆ ಬಿಲಸ್ ಪುರ್ ನ ಕೊನಿಯವರು. ಆಕೆಗೆ ಆರೋಪಿಯ ಜತೆಗೆ 2009ರಿಂದ ಪರಿಚಯ ಇತ್ತು ಮತ್ತು ಪ್ರೇಮ ಸಂಬಂಧ ಇತ್ತು. ಆರೋಪಿಯು ಆಕೆಯನ್ನು ಮದುವೆ ಆಗುವುದಾಗಿ ಹೇಳಿದ್ದ. ಈ ವಿಚಾರ ಅವರ ಕುಟುಂಬದವರಿಗೂ ತಿಳಿದಿತ್ತು. ಸಂತ್ರಸ್ತೆಯ ಜತೆ ಸಂಬಂಧ ಇದ್ದರೂ ಮತ್ತೊಬ್ಬ ಮಹಿಳೆ ಜತೆಗೆ ಆರೋಪಿಯು ನಿಶ್ಚಿತಾರ್ಥ ಮಾಡಿಕೊಂಡಿದ್ದ.
ಸಂತ್ರಸ್ತೆಗೆ ನೀಡಿದ್ದ ಮಾತು ಮುರಿದು, ನಿಶ್ಚಿತಾರ್ಥವಾಗಿದ್ದ ಮಹಿಳೆ ಜತೆಗೆ ಆರೋಪಿಯು ಮದುವೆ ಆಗಿದ್ದ. ಆತನ ವಿರುದ್ಧ ಅತ್ಯಾಚಾರದ ಆರೋಪ ಮಾಡಲಾಗಿತ್ತು. ಎಫ್ ಐಆರ್ ದಾಖಲಾಗಿತ್ತು. ಹೈ ಕೋರ್ಟ್ ನಲ್ಲಿ ಅಪರಾಧವನ್ನು ಎತ್ತಿಹಿಡಿದು, ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಮಾನವನ್ನು ಪ್ರಶ್ನಿಸಿದ ಆರೋಪಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.
ಕೋರ್ಟ್ ವಿಚಾರಣೆ ವೇಳೆ ಗಮನಕ್ಕೆ ಬಂದಿದ್ದ ಅಂಶ ಏನೆಂದರೆ, ಆರೋಪಿಗೆ ಸಂತ್ರಸ್ತೆಯನ್ನು ಮದುವೆ ಆಗುವ ಉದ್ದೇಶ ಇರಲಿಲ್ಲ. ಮದುವೆ ನೆಪದಲ್ಲಿ ಮಹಿಳೆ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇದು ಅತ್ಯಾಚಾರ ಎಂದು ಕೋರ್ಟ್ ಹೇಳಿದೆ. ಅತ್ಯಾಚಾರಿಯು ತನ್ನ ಅಪರಾಧದ ಪರಿಣಾಮ ಅನುಭವಿಸಬೇಕು ಎಂದು ಹೇಳಲಾಗಿದೆ.
ಅನೈತಿಕ ಸಂಬಂಧ : ಗಂಡಸಿಗಷ್ಟೇ ಶಿಕ್ಷೆಯೇಕೆ? ಸುಪ್ರೀಂ
ಸಂತ್ರಸ್ತೆಯನ್ನು ಮದುವೆ ಆಗುವ ಉದ್ದೇಶ ಆತನಿಗೆ ಇರಲಿಲ್ಲ ಅಂದಿದ್ದರೆ ದೈಹಿಕ ಸಂಬಂಧಕ್ಕೆ ಆಕೆ ಒಪ್ಪುತ್ತಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಇನ್ನು ಆರೋಪಿಯ ಶಿಕ್ಷೆ ಪ್ರಮಾಣವನ್ನು ಹತ್ತು ವರ್ಷದಿಂದ ಏಳು ವರ್ಷಕ್ಕೆ ಇಳಿಸಲಾಗಿದೆ.