ದೆಹಲಿಯ ಹಿಂಸಾಚಾರ ಫೋಟೋ ಜರ್ನಲಿಸ್ಟ್ ಕಂಡಂತೆ
ನವದೆಹಲಿ, ಫೆಬ್ರವರಿ.25: ಭಾರತ ಪ್ರವಾಸಕ್ಕಾಗಿ ಆಗಮಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ಕಡೆ ರಾಜಾತಿಥ್ಯ ನೀಡಲಾಗುತ್ತಿದೆ. ಇನ್ನೊಂದಡೆ ಕಡೆ ದೆಹಲಿಯ ಈಶಾನ್ಯ ಭಾಗವು ರಾತ್ರೋರಾತ್ರಿ ಹೊತ್ತಿ ಉರಿದಿದೆ. ಜನರು ದೆಹಲಿಯಲ್ಲಿ ಕಾನೂನು ಹೇಗೆ ದುಷ್ಕರ್ಮಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಈ ವರದಿಯಿಂದ ಬೆಳಕಿಗೆ ಬಂದಿದೆ.
ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದ್ದು, ಇದುವರೆಗೂ ಏಳು ಮಂದಿ ಮೃತಪಟ್ಟಿದ್ದಾರೆ. 76ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತ
ಕಳೆದ ಫೆಬ್ರವರಿ.24ರ ಮಧ್ಯಾಹ್ನ 12.15ರ ಸುಮಾರಿಗೆ ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ವರದಿಗೆ ತೆರಳಿದ ಟೈಮ್ಸ್ ಆಫ್ ಇಂಡಿಯಾದ ಫೋಟೋ ಜರ್ನಲಿಸ್ಟ್ ಅನಿಂದ್ಯಾ ಛಟ್ಟೋಪಾಧ್ಯಾಯ ತಮಗೆ ಆದಂಥಾ ಕರಾಳ ಅನುಭವದ ಕುರಿತು ವರದಿ ಮಾಡಿದ್ದಾರೆ. ಹಿಂಸಾಚಾರದ ಹಿಂದಿರುವ ಕರಾಳ ಕಥೆಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಫೋಟೋ ಜರ್ನಲಿಸ್ಟ್ ಹಣೆಗೆ ಕುಂಕುಮವಿಟ್ಟ ಅಪರಿಚಿತ ವ್ಯಕ್ತಿ
ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಮೌಜ್ ಪುರ್ ಪ್ರದೇಶಕ್ಕೆ ವರದಿಗೆಂದು ತೆರಳಿದ್ದೆನು. ಮೌಜ್ ಪುರ್ ಮೆಟ್ರೋ ನಿಲ್ದಾಣದ ಸಮೀಪ ತೆರಳುತ್ತಿದ್ದಂತೆ ಹಿಂದೂ ಸೇನಾ ಸದಸ್ಯನೊಬ್ಬ ನನ್ನ ಬಳಿಗೆ ಬಂದು ಹಣೆಗೆ ಕುಂಕುಮವನ್ನು ಹಚ್ಚಿದನು. ನನ್ನ ಬಳಿಯಿದ್ದ ಕ್ಯಾಮರಾವನ್ನು ನೋಡಿ ನಾನೊಬ್ಬ ಫೋಟೋ ಜರ್ನಲಿಸ್ಟ್ ಎಂದು ಗುರುತಿಸಿದ ಆತ, "ಈ ಕುಂಕುಮ ಹಚ್ಚಿಕೊಳ್ಳುವುದರಿಂದ ನಿನ್ನ ಕೆಲಸಕ್ಕೆ ಸಹಾಯವಾಗುತ್ತದೆ" ಎಂದು ಹೇಳಿ ಅಲ್ಲಿಂದ ಹೊರಟನು.
15 ನಿಮಿಷಗಳಲ್ಲಿ ಬದಲಾದ ಸಂಪೂರ್ಣ ಚಿತ್ರಣ
ಆ ವ್ಯಕ್ತಿ ನನ್ನ ಹಣೆಗೆ ಕುಂಕುಮವನ್ನಿಟ್ಟು ತೆರಳಿದ 15 ನಿಮಿಷಗಳಲ್ಲೇ ಅಲ್ಲಿದ್ದ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಎಲ್ಲೆಲ್ಲೂ ಕಲ್ಲುತೂರಾಟ, ಮೋದಿ ಮೋದಿ ಎಂಬ ಘೋಷವಾಕ್ಯ. ಕಟ್ಟಡಗಳಿಗೆ ಉದ್ರಿಕ್ತರು ಬೆಂಕಿ ಹಚ್ಚುತ್ತಿದ್ದರೆ, ನೋಡ ನೋಡುತ್ತಿದ್ದಂತೆ ಆ ಪ್ರವೇಶದಲ್ಲಿ ಕಾರ್ಮೋಡ ಆವರಿಸಿತು. ಹೊತ್ತಿ ಉರಿಯುತ್ತಿದ್ದ ಕಟ್ಟಡದ ಫೋಟೋಗಳನ್ನು ತೆಗೆಯಲು ನಾನು ಮುಂದಾದೆ. ಆಗ ಶಿವನ ದೇವಸ್ಥಾನದ ಬಳಿಯಿದ್ದ ಕೆಲವರು ನನ್ನನ್ನು ತಡೆದರು. "ಸಹೋದರ.. ನೀನೂ ಕೂಡಾ ಒಬ್ಬ ಹಿಂದೂ ಆಗಿದ್ದು, ಅಲ್ಲಿಗೆ ಏಕೆ ಹೋಗುತ್ತಿಯಾ" ಎಂದು ಪ್ರಶ್ನೆ ಮಾಡಿದರು. ಅದರಲ್ಲಿ ಒಬ್ಬ ವ್ಯಕ್ತಿ ಹಿಂದೂಗಳು ಇಂದು ಎಚ್ಚರಗೊಂಡಿದ್ದಾರೆ ಎಂದು ಕೂಗಿದನು.
ಸಿಎಎ ಪ್ರತಿಭಟನೆ: ನೀವು ದೆಹಲಿಯಲ್ಲಿದ್ದರೆ ಈ ರಸ್ತೆಗಳಲ್ಲಿ ಸಂಚರಿಸಬೇಡಿ
ರಾಡ್ ಹಿಡಿದು ಬಂದು ಬೆದರಿಕೆ ಹಾಕಿದ ಅಪರಿಚಿತರು
ಇನ್ನು, ಅಲ್ಲಿಂದ ಮುಂದೆ ಆಗಮಿಸಿ ಇನ್ನೊಂದು ಕಡೆಯಲ್ಲಿ ನಿರ್ಮಾಣವಾದ ಪರಿಸ್ಥಿತಿಯ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದೆನು. ಇತ್ತ ಕೈಯಲ್ಲಿ ದೊಣ್ಣೆ ಮತ್ತು ರಾಡ್ ಹಿಡಿದು ಬಂದ ಅಪರಿಚಿತ ವ್ಯಕ್ತಿಗಳು, ತನ್ನ ಕ್ಯಾಮರಾವನ್ನು ಕಸಿದುಕೊಳ್ಳಲು ಯತ್ನಿಸಿದರು. ಈ ವೇಳೆ ನನ್ನ ಜೊತೆಗಿದ್ದ ವರದಿಗಾರ ಸಾಕ್ಷಿಚಂದ್, ನನ್ನ ಬೆಂಬಲಕ್ಕೆ ನಿಂತನು. ಇದರಿಂದ ಬೆದರಿದ ಆ ಗುಂಪು ಅಲ್ಲಿಂದ ಕಾಲ್ಕಿತ್ತಿತು.
ಧರ್ಮದ ಬಗ್ಗೆ ಪ್ರಶ್ನೆ ಮಾಡಿ ಆವಾಜ್ ಹಾಕಿದ ವ್ಯಕ್ತಿ
ಮೊದಲಿಗೆ ಅಲ್ಲಿಂದ ತೆರಳಿದ ಗುಂಪು ನನ್ನನ್ನು ಫಾಲೋ ಮಾಡುತ್ತಿರುವುದು ನನ್ನ ಅರಿವಿಗೆ ಬಂತು. ಅದಾಗಿ ಸ್ವಲ್ಪ ಹೊತ್ತಿಗೆ ನನ್ನ ಎದುರು ಬಂದು ನಿಂತ ವ್ಯಕ್ತಿಯೊಬ್ಬ "ತಮ್ಮಾ.. ಅತಿಬುದ್ಧಿವಂತಿಕೆ ತೋರಿಸುವುದಕ್ಕೆ ಹೋಗಬೇಡ, ನೀನು ಹಿಂದೂನಾ ಅಥವಾ ಮುಸ್ಲಿಮಾ ಹೇಳು" ಎಂದು ಪ್ರಶ್ನೆ ಮಾಡಿದನು. ನನ್ನ ಧರ್ಮ ಯಾವುದು ಎಂದು ತಿಳಿದುಕೊಳ್ಳುವುದಕ್ಕಾಗಿ ನನ್ನ ಬಟ್ಟೆ ಕಳಚಲು ಮುಂದಾದರು. ನಾನು ಪ್ರತಿರೋಧ ಒಡ್ಡಿದಾಗ ಬೆದರಿಕೆಯೊಡ್ಡಿ ಅಲ್ಲಿಂದ ತೆರಳಿದರು.
ನಮ್ಮ ತಂದೆ ಮಾಡಿದ ತಪ್ಪೇನು? ಈ ಮುಗ್ಧ ಮಕ್ಕಳಿಗೆ ಉತ್ತರ ಹೇಳುವವರಾರು?
ಆಟೋ ಏರಿದರೂ ಮರೆಯಾಗದ ಆತಂಕದ ಛಾಯೆ
ಒಂದು ಗುಂಪಿನ ಜನರು ಬೆದರಿಕೆ ಹಾಕಿದ ನಂತರ ನನ್ನ ಕೆಲಸವನ್ನು ಮುಗಿಸಿಕೊಂಡು ಕಚೇರಿ ಕಡೆಗೆ ತೆರಳಲು ಆಫೀಸ್ ವಾಹನವನ್ನು ನೋಡಿದೆ. ಆದರೆ, ಅಲ್ಲೆಲ್ಲೂ ನಮ್ಮ ಆಫೀಸ್ ನ ವಾಹನ ಕಾಣಿಸಲಿಲ್ಲ. ಮೌಜ್ ಪುರ್ ನಿಂದ 100 ಮೀಟರ್ ನಷ್ಟು ದೂರ ನಡೆದುಕೊಂಡು ಬಂದು ಆಟೋದಲ್ಲಿ ಆಫೀಸ್ ನತ್ತ ಮುಖ ಮಾಡಿದೆ. ಈ ಮಾರ್ಗ ಮಧ್ಯದಲ್ಲೂ ನಾಲ್ವರು ನಾನಿದ್ದ ಆಟೋಗೆ ಅಡ್ಡ ಹಾಕಿದರು. ಆಟೋದಲ್ಲಿ ಕುಳಿತಿದ್ದ ನನ್ನನ್ನು ಹಾಗೂ ಆಟೋ ಚಾಲಕನನ್ನು ಶರ್ಟ್ ಕಾಲರ್ ಹಿಡಿದು ಹೊರಗೆ ಎಳೆದರು.
ಘಟನೆಯಿಂದ ಆಟೋ ಚಾಲಕನೂ ಗಲಿಬಿಲಿ
ನಡುರಸ್ತೆಯಲ್ಲೇ ಶರ್ಟ್ ಕಾಲರ್ ಹಿಡಿದು ಎಳೆದ ಜನರಲ್ಲಿ ನಾನೊಬ್ಬ ಫೋಟೋ ಜರ್ನಲಿಸ್ಟ್ ಆಗಿದ್ದು, ಆಟೋ ಚಾಲಕನು ಪಾಪ ಅಮಾಯಕ ಎಂದು ಅವರಲ್ಲಿ ಮನವಿ ಮಾಡಿಕೊಂಡೆ. ನಂತರದಲ್ಲಿ ಅವರು ನಮ್ಮನ್ನು ಬಿಟ್ಟು ಮುಂದೆ ನಡೆದರು. ಆಟೋ ಚಾಲಕನು ನನ್ನನ್ನು ಡ್ರಾಪ್ ಮಾಡಿದಾಗ ಘಟನೆಯಿಂದ ಆತನೂ ಸಹ ಗಲಿಬಿಲಿಗೊಂಡಿದ್ದು ನನ್ನ ಗಮನಕ್ಕೆ ಬಂದಿತು. ವಿಡಂಬನಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು ಇದುವರೆಗೂ ನನ್ನನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ ಎಂದು ಹೇಳಿ ಹೊರಟನು.