ಜೆಎನ್ ಯು: ಮಣಿಪುರ ಮೂಲದ ವಿದ್ಯಾರ್ಥಿ ನಿಗೂಢ ಸಾವು
ನವದೆಹಲಿ, ಅಕ್ಟೋಬರ್ 26: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ ಮತ್ತೊಮ್ಮೆ ಕೆಟ್ಟ ವಿಷಯಕ್ಕೆ ಸುದ್ದಿಯಾಗುತ್ತಿದೆ. ಕಳೆದ ವಾರ ಹಾಸ್ಟೆಲ್ ಗಲಾಟೆ, ವಿದ್ಯಾರ್ಥಿ ನಜೀಂ ಅಹ್ಮದ್ ನಾಪತ್ತೆ ಪ್ರಕರಣದ ನಂತರ ಬುಧವಾರ ಸಂಶೋಧನಾ ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆ ಸುದ್ದಿ ಬಂದಿದೆ.
ಜೆಎನ್ ಯು ವಿಶ್ವವಿದ್ಯಾನಿಲಯದ ಪಿ.ಹೆಚ್.ಡಿ. ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಣಿಪುರ ಮೂಲದ ಜೆ.ಆರ್. ಫಿಲೋಮಿನ್ ರಾಜ್, ಬ್ರಹ್ಮಪುತ್ರ ಹಾಸ್ಟೆಲ್ ನ 171 ನೇ ನಂಬರ್ ನ ರೂಮಿನಲ್ಲಿ ಮೃತಪಟ್ಟಿದ್ದಾನೆ. ಅಕ್ಕಪಕ್ಕ ರೂಮಿನ ವಿದ್ಯಾರ್ಥಿಗಳು ರೂಮಿನಿಂದ ದುರ್ವಾಸನೆ ಬರುತ್ತಿದೆ ಎಂದ ಹಾಸ್ಟೆಲ್ ವಾರ್ಡನಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಾಗಿಲು ಒಡೆದು ನೋಡಿದರೆ ಫಿಲೋಮಿನ್ ಸಾವನ್ನಪ್ಪಿರುವುದು ಕಂಡು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ. ಫಿಲೋಮಿನ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಮೇಲ್ನೊಟಕ್ಕೆ ಇದು ಅತಿಯಾದ ಮದ್ಯಸೇವನೆಯಿಂದ ಆಗಿರುವ ಸಾವು ಎಂದು ಕಂಡು ಬರುತ್ತದೆ ಎಂದು ಉಪ ಪೊಲೀಸ್ ಆಯುಕ್ತ ಈಶ್ವರ್ ಸಿಂಗ್ ಹೇಳಿದ್ದಾರೆ.
ಈ ನಡುವೆ ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್ ಅಹ್ಮದ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಪ್ರಕಟಿಸಿದ್ದಾರೆ.