ತೈಲ ಬೆಲೆ ಏರಿಕೆ; ಪತ್ರ ಬರೆದ ಸೋನಿಯಾ ಗಾಂಧಿಗೆ ಪೆಟ್ರೋಲಿಯಂ ಸಚಿವರ ತಿರುಗೇಟು
ನವದೆಹಲಿ, ಫೆಬ್ರವರಿ 23: ದೇಶದಲ್ಲಿ ತೈಲ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದು, ಈ ಪತ್ರದ ಕುರಿತು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದಾರೆ.
"ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಸುಂಕ ವಿಧಿಸಲಾಗಿದೆ" ಎಂದು ತಿರುಗೇಟು ನೀಡಿದ್ದಾರೆ.
'ರಾಜಧರ್ಮ' ಪಾಲಿಸಿ: ಮೋದಿಗೆ ಸೋನಿಯಾ ಗಾಂಧಿ ಪತ್ರ
ದೇಶದಲ್ಲಿ ಏರಿಕೆಯಾಗುತ್ತಿರುವ ಇಂಧನ ಬೆಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ತೈಲ ಬೆಲೆ ಮೇಲೆ ಅಧಿಕ ಅಬಕಾರಿ ಸುಂಕ ವಿಧಿಸುವ ಮೂಲಕ ಜನಸಾಮಾನ್ಯರ ಸಂಕಷ್ಟ ಹಾಗೂ ಬೇಗುದಿಯಿಂದ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಮಂಗಳವಾರ ಉತ್ತರಿಸಿರುವ ಧರ್ಮೇಂದ್ರ ಪ್ರಧಾನ್, "ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿಯೇ ಅತಿ ಹಚ್ಚಿನ ಸುಂಕ ವಿಧಿಸಲಾಗಿದೆ ಎಂಬುದು ಸೋನಿಯಾ ಜೀ ಅವರಿಗೆ ತಿಳಿದಿರಬೇಕು. ಲಾಕ್ಡೌನ್ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಳಿಕೆ ನಗಣ್ಯವಾಗಿತ್ತು. ಉದ್ಯೋಗ ಹೆಚ್ಚಳಕ್ಕೆ ಹಲವು ವಲಯಗಳಿಗೆ ಹೆಚ್ಚಿನ ಮೊತ್ತವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದೇವೆ. ಅದಕ್ಕೂ ಗಮನಿಸಿ" ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಇಂಧನ ಬೆಲೆ ಏರಿಸುವ ಅನಿವಾರ್ಯವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮುಂದೆ ಕ್ರಮೇಣ ಈ ಬೆಲೆ ತಗ್ಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.