ಪೆಗಾಸಸ್ ಹಗರಣ: ಅಣಕು ಸಂಸತ್ತನ್ನು ನಡೆಸಲು ವಿಪಕ್ಷಗಳಿಂದ ಚಿಂತನೆ, ನಾಳೆ ಸಭೆ
ನವದೆಹಲಿ, ಆ.02: ಸಂಸತ್ತಿನ ಮುಂಗಾರು ಅಧಿವೇಶನವು ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವೆ ಪೆಗಾಸಸ್ ಬೇಹುಗಾರಿಕೆಯ ವಿವಾದದಿಂದಾಗಿ ಉಳಿದ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶವೇ ಸಿಗದೇ ಹೋಗಿದೆ. ಈ ನಡುವೆ ವಿರೋಧ ಪಕ್ಷಗಳು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ನ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ಸೇರಲಿದೆ.
ವಿರೋಧ ಪಕ್ಷಗಳು ಸಂಕೀರ್ಣದ ಹೊರಗೆ ಅಣಕು ಸಂಸತ್ತನ್ನು ನಡೆಸಲು ಆಲೋಚಿಸುತ್ತಿವೆ, ಕೇಂದ್ರ ಬಿಜೆಪಿ ಸರ್ಕಾರವು ತಮ್ಮ ಆವೃತ್ತಿಯನ್ನು ಸಾರ್ವಜನಿಕರಿಗೆ ತಲುಪಲು ಅನುಮತಿಸುವುದಿಲ್ಲ ಮತ್ತು ತನಗೆ ಬೇಕಾದ ಮಸೂದೆಯನ್ನು ಬೇಕಾಬಿಟ್ಟಿ ಅಂಗೀಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿದೆ.
ಪೆಗಾಸಸ್ ಹಗರಣ: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 'ಬೇಹುಗಾರಿಕೆಯ ಜೇಮ್ಸ್ ಬಾಂಡ್' ಎಂದ ಕೇಂದ್ರ ಸಚಿವ
ಹಾಗೆಯೇ ಪೆಗಾಸಸ್ ರಾಷ್ಟ್ರೀಯ ಭದ್ರತೆಯ ಸಮಸ್ಯೆಯಾಗಿದ್ದು, ಸರ್ಕಾರವು ಅದನ್ನು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದೆ. ಜುಲೈ 19 ರಂದು ಮಳೆಗಾಲದ ಅಧಿವೇಶನ ಆರಂಭವಾದಾಗಿನಿಂದ, ವಿರೋಧ ಪಕ್ಷಗಳ ಪ್ರತಿಭಟನೆಗಳು ಮತ್ತು ಪೆಗಾಸಸ್ ಹಗರಣ ಮತ್ತು ರೈತ ಪ್ರತಿಭಟನೆಗಳ ಕುರಿತು ಚರ್ಚೆಗಳ ಬೇಡಿಕೆಗಳಿಂದಾಗಿ ಸಂಸತ್ತು ಕಾರ್ಯನಿರ್ವಹಿಸಲಿಲ್ಲ.
ಜುಲೈ 19 ರಂದು ಮುಂಗಾರು ಅಧಿವೇಶನ ನಡೆದಾಗಿನಿಂದ, ಸಂಸತ್ತು ಸಂಭವನೀಯ 107 ಗಂಟೆಗಳಲ್ಲಿ ಒಟ್ಟು 18 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ. ಅಂದರೆ ಒಟ್ಟಾರೆ ತೆರಿಗೆದಾರರಿಗೆ 133 ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆಗೆ 54 ಗಂಟೆಗಳಲ್ಲಿ ಕೇವಲ ಏಳು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ರಾಜ್ಯಸಭೆಯು ಸುಮಾರು 53 ಗಂಟೆಗಳಲ್ಲಿ 11 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಹೀಗಾಗಿ, ಸುಮಾರು 89 ಗಂಟೆಗಳ ಕೆಲಸದ ಸಮಯ ವ್ಯರ್ಥವಾಗಿದೆ ಎಂದು ಮೂಲಗಳು ಹೇಳಿದೆ.
'ಪೆಗಾಸಸ್ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ
ಅಧಿವೇಶನದ ಮೊದಲ ದಿನ, ಪ್ರತಿಪಕ್ಷಗಳ ಗದ್ದಲದ ನಡುವೆ ಪ್ರಧಾನಿ ನರೇಂದ್ರ ಮೋದಿಗೆ ಸಚಿವರನ್ನು ಪರಿಚಯಿಸಲು ಕೂಡ ಅವಕಾಶ ನೀಡಲಿಲ್ಲ. ಕಲಾಪವನ್ನು ಮುಂದೂಡುವವರೆಗೂ ಸದನದಲ್ಲಿ ಗದ್ದಲ ನಡೆಯಿತು ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆ ಬಿಜೆಪಿಯು ತನ್ನ ನೂತನ ಸಚಿವರುಗಳನ್ನು ಪರಿಚಯಿಸುವ ದೃಷ್ಟಿಯಿಂದ ಹಾಗೂ ಮುಂದಿನ ಲೋಕ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನ ಆಶೀರ್ವಾದ ಯಾತ್ರೆಯನ್ನು ನಡೆಸಲಿದೆ. ಇದು ಆ. 16 ರಿಂದ ಆರಂಭವಾಗಲಿದ್ದು, 43 ಕೇಂದ್ರ ಸಚಿವರುಗಳು ತಲಾ 400 ಕಿಮೀ ಪ್ರಯಾಣ ನಡೆಸಲಿದ್ದಾರೆ.
ಗದ್ದಲದ ನಡುವೆ ಪ್ರತಿಕ್ರಿಯಿಸಿದ ಮೋದಿ, "ಸಂಸತ್ತಿನಲ್ಲಿ ಉತ್ಸಾಹ ಇರುತ್ತದೆ ಎಂದು ನಾನು ಭಾವಿಸಿದ್ದೇನೆ ಏಕೆಂದರೆ ಅನೇಕ ಮಹಿಳೆಯರು, ದಲಿತರು, ಆದಿವಾಸಿಗಳು ಸಚಿವರಾಗಿದ್ದಾರೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆ, ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ," ಎಂದು ಹೇಳಿದ್ದರು.
ಜನ ಆಶೀರ್ವಾದ ಯಾತ್ರೆ: ಆ. 16 ರಿಂದ 43 ಕೇಂದ್ರ ಸಚಿವರುಗಳಿಂದ ತಲಾ 400 ಕಿಮೀ ಪ್ರಯಾಣ
ಈ ನಡುವೆ ಪೆಗಾಸಸ್ ಬೇಹುಗಾರಿಕೆ ಆರೋಪದ ಕುರಿತು ಚರ್ಚೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ "ಬೇಹುಗಾರಿಕೆಯ ಜೇಮ್ಸ್ ಬಾಂಡ್" ಎಂದು ಲೇವಡಿ ಮಾಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಈ ಸಂಸತ್ತಿನ ಸಮಯವನ್ನು ವ್ಯರ್ಥ ಮಾಡಲು ಬಯಸಿದೆ ಎಂದು ಆರೋಪಿಸಿದ್ದಾರೆ. ಈ ಪೆಗಾಸಸ್ ಬೇಹುಗಾರಿಕೆ ವಿಚಾರವು "ನಕಲಿ ಮತ್ತು ನಿರ್ಮಿತ" ಸಮಸ್ಯೆಗಳು ಎಂದು ಕೂಡಾ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದರು.
"ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು 'ಗಲಾಟೆ ಮತ್ತು ಓಟ' ಸೂತ್ರವನ್ನು ಅಳವಡಿಸಿಕೊಳ್ಳುತ್ತಿವೆ. ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಾಗಲಿ ಅಥವಾ ಜನರ ಸಮಸ್ಯೆಗಳ ಕುರಿತು ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿಲ್ಲ," ಎಂದು ಟೀಕಿಸಿದ್ದಾರೆ. "ವಿರೋಧ ಪಕ್ಷದವರು ಮೊದಲು ನಮಗೆ ಕೊರೊನಾ ಸೋಂಕು ಸಾಂಕ್ರಾಮಿಕದ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು. ಆದರೆ ನಂತರ ಅದನ್ನು ಒಪ್ಪಲಿಲ್ಲ. ಬಳಿಕ ನಮಗೆ ರೈತರ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು. ನಂತರ ಅದನ್ನೂ ಒಪ್ಪಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ಸಮಸ್ಯೆ ಉಂಟಾಗಿದೆ. ಅದರ ಬಗ್ಗೆ ಅಥವಾ ವಿಪಕ್ಷದವರು ಮಾತನಾಡಿಕೊಳ್ಳುವ ಬೆಲೆ ಏರಿಕೆ ಸಮಸ್ಯೆಯ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ, ಯಾವುದೇ ಗುರುತನ್ನು ಹೊಂದಿರದ ನಕಲಿ ಮತ್ತು ಕಪೋಲಿತ ವಿಷಯಗಳಿಗಾಗಿ ಸಮಯ ವ್ಯರ್ಥ ಮಾಡಲು ವಿಪಕ್ಷದವರು ಬಯಸುತ್ತಾರೆ," ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)