ಐಎಂಐ ಸತ್ಯ ಒಪ್ಪಿಕೊಳ್ಳುತ್ತಿಲ್ಲ; ಕೊರೋನಿಲ್ ಸಮರ್ಥಿಸಿಕೊಂಡ ಪತಂಜಲಿ
ನವದೆಹಲಿ, ಫೆಬ್ರವರಿ 25: ಪತಂಜಲಿಯ ಕೊರೋನಿಲ್ ಔಷಧಿಗೆ ಪ್ರಚಾರ ನೀಡಿದ ಕಾರಣ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಂದ ವಿವರಣೆ ಕೇಳಿದ ಭಾರತೀಯ ವೈದ್ಯಕೀಯ ಸಂಸ್ಥೆ ನಡೆಯನ್ನು ಪತಂಜಲಿ ಖಂಡಿಸಿದೆ.
"ಸತ್ಯವನ್ನು ಒಪ್ಪಿಕೊಳ್ಳಲು ಭಾರತೀಯ ವೈದ್ಯಕೀಯ ಸಂಸ್ಥೆಗೆ ಆಗುತ್ತಿಲ್ಲ. ವೈದ್ಯಕೀಯ ವೃತ್ತಿಯಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಯುವತ್ತ ಸಂಸ್ಥೆ ಗಮನ ನೀಡುವುದು ಒಳ್ಳೆಯದು" ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ವಕ್ತಾರ ಎಸ್ಕೆ ತಿಜರಾವಾಲ ತಿರುಗೇಟು ನೀಡಿದ್ದಾರೆ.
ಪತಂಜಲಿ "ಕೊರೋನಿಲ್" ಬಗ್ಗೆ ಮತ್ತೊಂದು ವಿವಾದ; ಆರೋಗ್ಯ ಸಚಿವರ ಮೇಲೆ ಐಎಂಎ ವಾಗ್ದಾಳಿ
ಪತಂಜಲಿ ಪರಿಚಯಿಸಲಾದ ಕೊರೋನಿಲ್ ಮಾತ್ರೆಗಳು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರಕು ಉತ್ಪಾದನಾ ನೀತಿಯ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. 158 ದೇಶಗಳು ಕೊರೋನಿಲ್ ಮಾರಾಟಕ್ಕೆ ಅನುಮತಿ ನೀಡಿವೆ. ಇದು ಐತಿಹಾಸಿಕ ಎಂದು ಸಂಸ್ಥೆ ಹೇಳಿಕೊಂಡಿತ್ತು. ಕೊರೋನಿಲ್ ವೈಜ್ಞಾನಿಕ ಹಾಗೂ ಸಂಶೋಧನಾ ಆಧರಿತ ಔಷಧ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಔಷಧಿ ಹಾಗೂ ಪುರಾವೆ ದಾಖಲೆಯನ್ನು ಬಿಡುಗಡೆಗೊಳಿಸಲಾಗಿತ್ತು.
ಆದರೆ ಇದರ ಬೆನ್ನಲ್ಲೇ, ತಾನು ಯಾವುದೇ ಪಾರಂಪರಿಕ ಔಷಧಿ ಪರಿಶೀಲನೆ ನಡೆಸಿಲ್ಲ ಎಂದು ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿತ್ತು. ಈ ಸಂಗತಿ ನಂತರ, ಅವೈಜ್ಞಾನಿಕ ಔಷಧದ ಪ್ರಚಾರದಲ್ಲಿ ಆರೋಗ್ಯ ಸಚಿವರೇ ತೊಡಗಿಕೊಂಡಿದ್ದಾರೆ. ಇದು ದೇಶಕ್ಕೆ ಅವಮಾನಕರ ಸಂಗತಿ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಅವರಿಂದ ಐಎಂಎ ವಿವರಣೆ ಕೇಳಿತ್ತು.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಾವಳಿ ಪ್ರಕಾರ ಯಾವುದೇ ವೈದ್ಯರು ಯಾವುದೇ ಔಷಧವನ್ನು ಪ್ರಚಾರ ಮಾಡುವಂತಿಲ್ಲ. ಆದರೆ ಸ್ವತಃ ವೈದ್ಯರಾಗಿರುವ ಆರೋಗ್ಯ ಸಚಿವರೇ ಕೊರೊನಿಲ್ ಔಷಧಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಶ್ಚರ್ಯಕರವಾಗಿದೆ ಎಂದು ಐಎಂಎ ತಿಳಿಸಿತ್ತು.