ಕೊರೊನಿಲ್'ನಿಂದ 3 ದಿನದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ: ಪತಂಜಲಿ
ನವದೆಹಲಿ, ಜುಲೈ 1: ಕೊರೊನಿಲ್ ಔಷಧದಿಂದ ಮೂರೇ ದಿನಗಳಲ್ಲಿ ಶೇ.67 ರಷ್ಟು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿದೆ.
ಈಗಾಗಲೇ ಈ ಔಷಧವನ್ನು ಕೊರೊನಾ ಸೋಂಕಿತರಿಗೆ ನೀಡಲಾಗಿದ್ದು, ಅದರಲ್ಲಿ ಶೇ.67 ರಷ್ಟು ಮಂದಿ ಮೂರೇ ದಿನದಲ್ಲಿ ಗುಣಮುಖರಾಗಿದ್ದಾರೆ. ಹಾಗೆಯೇ ಏಳು ದಿನಗಳಲ್ಲಿ ಶೇ.100 ರಷ್ಟು ಗುಣಮುಖರಾಗಿದ್ದಾರೆ.
ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು: ಕೈ ಎತ್ತಿದ ಬಾಬಾ ರಾಮ್ದೇವ್
45 ರೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿ ದಾಖಲೆಗಳನ್ನು ಆಯುಷ್ ಮಂತ್ರಾಲಯಕ್ಕೆ ಸಲ್ಲಿಸಿದ್ದಾರೆ. ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ 500 ಮಂದಿ ಸಂಶೋಧಕರು ಸೇರಿ ಈ ಔಷಧ ತಯಾರಿಸಿದ್ದಾರೆ.
ಇದಕ್ಕೂ ಮುನ್ನ ಕೊವಿಡ್-19ಗೆ ನಾವು ಔಷಧ ತಯಾರಿಸಿಯೇ ಇಲ್ಲ ಹಾಗೂ ಕೊರೊನಾ ಕಿಟ್ ಎಂಬ ಹೆಸರಲ್ಲಿ ಮಾರುಕಟ್ಟೆಗೆ ಪರಿಚಯಿಸಿಲ್ಲ ಎಂದು ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ಸ್ಪಷ್ಟನೆ ನೀಡಿದ್ದರು.
ಕೊರೊನಿಲ್ ಕಿಟ್ ಲೈಸನ್ಸ್ ಗೊಂದಲ: ಆಚಾರ್ಯ ಬಾಲಕೃಷ್ಣ ಸ್ಪಷ್ಟನೆ
ಉತ್ತರಾಖಂಡ ಸರಕಾರದ ಔಷಧ ಇಲಾಖೆಯ ನೀಡಿದ ನೋಟಿಸ್ಗೆ ಲಿಖಿತ ಉತ್ತರ ನೀಡಿದ ಪತಂಜಲಿ, ಕೊರೊನಾಗೆ ನಾವು ಔಷಧ ತಯಾರಿಸಿಲ್ಲ. ಬದಲಾಗಿ ವೈದ್ಯಕೀಯ ಪ್ರಯೋಗದಲ್ಲಿ ಯಶಸ್ವಿಯಾಗಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದೆ.
'ಸಂಸ್ಥೆಯು ಕೊರೊನಾಗೆ ಯಾವುದೇ ಔಷಧ ತಯಾರಿಸಿ ಬಿಡುಗಡೆ ಮಾಡಿಲ್ಲ. ಆದರೆ, ದಿವ್ಯಾ ಸ್ವಸಾರಿ ವಟಿ, ದಿವ್ಯಾ ಕೊರೊನಿಲ್ ಗುಳಿಗೆ ಹಾಗೂ ದಿವ್ಯ ಅನು ತೈಲವನ್ನು ಒಂದು ಪಾರ್ಸೆಲ್ ಪೊಟ್ಟಣದೊಳಗೆ ಪ್ಯಾಕ್ ಮಾಡಿದ್ದೆವು' ಎಂದು ಹೇಳಿದೆ.
"ನಾವು ತಯಾರಿಸಿರುವ ಔಷಧದ ಆರೋಗ್ಯ ಲಾಭದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೆವು ಹಾಗೂ ವೈದ್ಯಕೀಯ ಪ್ರಯೋಗದ ಕುರಿತು ವಿವರಣೆ ನೀಡಿದ್ದೆವು. ಆದರೆ, ಔಷಧದಿಂದ ಕೋವಿಡ್- 19 ಸೋಂಕು ನಿವಾರಣೆಯಾಗುತ್ತದೆ ಎಂದು ಯಾವತ್ತೂ ಹೇಳಿಲ್ಲ," ಎಂದು ಪತಂಜಲಿ ಹೇಳಿತ್ತು, ಮತ್ತೆ ಈಗ ಮಾತು ಬದಲಿಸಿದೆ.