2020ರ ಹೊತ್ತಿಗೆ ಎಸ್ಪಿ, ಬಿಎಸ್ಪಿ, ಆರ್ ಜೆಡಿ ನಿರ್ನಾಮ: ಪಾಸ್ವಾನ್
ನವದೆಹಲಿ, ಜೂನ್ 04: ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ನಡುವಿನ ಮೈತ್ರಿ ಬಿರುಕಿನ ಬಗ್ಗೆ ಬಿಜೆಪಿ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರು ಪ್ರತಿಕ್ರಿಯಿಸಿದ್ದಾರೆ.
ಸಮಾಜವಾದಿ ಪಕ್ಷದ 'ಸೈಕಲ್' ಪಂಕ್ಚರ್ ಮಾಡಿ 'ಬೈ ಬೈ' ಎಂದ ಮಾಯಾವತಿ
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ದೇಶದ ಪುರಾತನ ಪಕ್ಷ ಕಾಂಗ್ರೆಸ್ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷ ಸ್ಥಾನ ಪಡೆಯಲು ಬೇಕಾದ ಸಂಖ್ಯೆಯನ್ನು ಪಡೆಯದ ಪಕ್ಷ ಎಂದು ಹಾಸ್ಯ ಮಾಡಿದ್ದರು. ಈಗ ಎಸ್ಪಿ- ಬಿಎಸ್ಪಿ ಮೈತ್ರಿ ಮುರಿಯುತ್ತಿದ್ದಂತೆ ಮಾತನಾಡಿ, 2020ರ ಹೊತ್ತಿಗೆ ಎಸ್ಪಿ, ಬಿಎಸ್ಪಿ, ಆರ್ ಜೆಡಿಯಂಥ ಪಕ್ಷಗಳು ನಿರ್ನಾಮವಾಗಲಿವೆ ಎಂದಿದ್ದಾರೆ.
'ಎಸ್ಪಿ ಹಾಗೂ ಬಿಎಸ್ಪಿ ನಡುವೆ ಎಂದಿಗೂ 'ಘಟಬಂಧನ್'(ಮೈತ್ರಿ) ಇರಲಿಲ್ಲ, ಎರಡು ಪಕ್ಷಗಳ ನಡುವೆ ಇದ್ದದ್ದು 'ಲಾಥ್ ಬಂಧನ್' (ಪರಸ್ಪರ ಕಿತ್ತಾಡಲು ಬಂದಿಯಾದವರು)' ಎಂದು ಎಲ್ ಜೆಪಿ ಅಧ್ಯಕ್ಷ ಪಾಸ್ವಾನ್ ಹೇಳಿದ್ದಾರೆ.
ಸೈಕಲಿನಿಂದ ಕೆಳಗಿಳಿದು ಏಕಾಂಗಿ ಯುದ್ಧಕ್ಕೆ ಹೊರಟ 'ಆನೆ'
'ಉತ್ತರಪ್ರದೇಶದಲ್ಲಿ ಮೈತ್ರಿ ಈಗ ಮಾಯವಾಗಿದೆ, ಬಿಹಾರದಲ್ಲೂ ಕಣ್ಮರೆಯಾಗಿದೆ, ಇನ್ಮುಂದೆ ದೇಶದೆಲ್ಲೆಡೆ ಈ ರೀತಿ ಮೈತ್ರಿ ಕಾಣಿಸುವುದಿಲ್ಲ, 2020ರ ಹೊತ್ತಿಗೆ ಈ ಮೂರು ಪಕ್ಷಗಳು ಅಳಿಸಿ ಹೋಗಲಿವೆ' ಎಂದು ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಎಸ್ಪಿ-ಬಿಎಸ್ಪಿ- ಆರ್ ಎಲ್ ಡಿ ಮೈತ್ರಿ ಕೂಟ ಸೆಣಸಿತ್ತು. ಆದರೆ, 80 ಸ್ಥಾನಗಳ ಪೈಕಿ 62 ಸ್ಥಾನ ಬಿಜೆಪಿ ಪಾಲಾದರೆ, ಮೈತ್ರಿಕೂಟಕ್ಕೆ 15 ಸ್ಥಾನ ಮಾತ್ರ ದಕ್ಕಿತ್ತು. ಇದಾದ ಬಳಿಕ ಮುಂಬರುವ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಎಸ್ಪಿ ಅಧಿನಾಯಕಿ ಮಾಯಾವತಿ ಘೋಷಿಸಿದ್ದರು. ಎಸ್ಪಿ ನಾಯಕ ಅಖಿಲೇಶ್ ಕೂಡಾ ಸಮಾಜವಾದಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದಿದ್ದರು.