ಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳು
ನವದೆಹಲಿ, ನವೆಂಬರ್ 18: ಸಂಸತ್ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆರ್ಥಿಕ ಕುಸಿತ, ನಿರುದ್ಯೋಗದ ಸಮಸ್ಯೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಾಮಾನ್ಯರ ಮೇಲೆ ಮುಂದುವರಿದ ನಿರ್ಬಂಧ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ವಿರೋಧಪಕ್ಷಗಳು ಆಡಳಿತಾರೂಢ ಎನ್ಡಿಎ ಸರ್ಕಾರದ ವಿರುದ್ಧ ಮುಗಿಬೀಳುವ ನಿರೀಕ್ಷೆಯಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370ನೇ ವಿಧಿ ರದ್ದುಗೊಳಿಸಿದ ಸುದೀರ್ಘ ಕಾಲದ ಬಳಿಕವೂ ಜನರು ಮುಕ್ತವಾಗಿ ಓಡಾಡಲು ಮತ್ತು ಮೂಲಭೂತ ಸೌಕರ್ಯಗಳನ್ನು ಬಳಸಿಕೊಳ್ಳಲು ನಿರ್ಬಂಧಗಳನ್ನು ಹೇರಲಾಗಿದೆ. ಇದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೂಡ ಚರ್ಚೆಯಾಗಿದೆ. ಇನ್ನು ಆರ್ಥಿಕ ಕುಸಿತದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಬಿಕ್ಕಟ್ಟು ಎದುರಾಗಿದೆ. ಉದ್ದಿಮೆಗಳು ನಷ್ಟದಲ್ಲಿ ಸಿಲುಕಿವೆ. ಇದು ನಿರುದ್ಯೋಗದ ಹೆಚ್ಚಳಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಎಲ್ಲ ವಿಚಾರಗಳನ್ನು ವಿಪಕ್ಷಗಳು ಪ್ರಮುಖ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಿವೆ.
ಶಿವಸೇನೆಗೆ ಮತ್ತೊಂದು ಭರ್ಜರಿ ಶಾಕ್ ನೀಡಿದ ಬಿಜೆಪಿ
ನ. 18ರಿಂದ ಡಿ. 13ರವರೆಗೆ ರಾಜ್ಯಸಭೆಯ 250ನೇ ಅಧಿವೇಶನ ನಡೆಯಲಿದ್ದು, ಈ ಅವಧಿಯಲ್ಲಿ 20 ಕಲಾಪಗಳು ನಡೆಯಲಿವೆ. ಎನ್ಡಿಎ ಸರ್ಕಾರವು ಎರಡನೆಯ ಅವಧಿಗೆ ಆಯ್ಕೆಯಾದ ಬಳಿಕ ನಡೆಯುತ್ತಿರುವ ಎರಡನೆಯ ಅಧಿವೇಶನ ಇದಾಗಿದೆ.
ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ 2019, ಮೆರಿಟೈಮ್ ಪೈರಸಿ ನಿಗ್ರಹ ಮಸೂದೆ 2019, ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2019 ಮುಂತಾದವು ಈ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
ವಿವಾದಿತ ಪೌರತ್ವ ಮಸೂದೆ
ಮುಂಗಾರು ಅಧಿವೇಶನದಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ವಿರೋಧಪಕ್ಷಗಳ ಪ್ರತಿಭಟನೆ ನಡುವೆ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಈ ಮಸೂದೆಯು ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವ ತಾರತಮ್ಯ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಧಾರ್ಮಿಕ ಕಾರಣಗಳಿಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಹಿಂದೂ, ಜೈನ, ಬೌದ್ಧ, ಕ್ರೈಸ್ತ, ಸಿಖ್ ಮತ್ತು ಪಾರ್ಸಿ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವ ಮಸೂದೆ ಇದಾಗಿದೆ.
ಎರಡು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ
ಇದರ ಜತೆಗೆ ಸರ್ಕಾರ ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸುವ ನಿರೀಕ್ಷೆಯಿದೆ. ಹೊಸ ಹಾಗೂ ದೇಶಿ ಉತ್ಪಾದನಾ ಕಂಪೆನಿಗಳಿಗೆ ಆರ್ಥಿಕ ಕುಸಿತದಿಂದ ನೆರವಾಗಲು ಕಾರ್ಪೊರೇಟ್ ತೆರಿಗೆ ಕಡಿತ ಮಾಡಲು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ನಲ್ಲಿ ಮಾಡಿದ ಘೋಷಣೆಯಂತೆ ಇ-ಸಿಗರೇಟ್ಗಳ ಮಾರಾಟ, ತಯಾರಿಕೆ ಮತ್ತು ಸಂಗ್ರಹವನ್ನು ನಿಷೇಧಿಸಲು ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ.
ಮತಾಂತರ ತಡೆ ಮಸೂದೆ ಮಂಡನೆಗೆ ಮೋದಿ ಸರ್ಕಾರ ಸಜ್ಜು
ಪರಿಗಣಿಸಬೇಕಾದ ಪ್ರಮುಖ ಮಸೂದೆಗಳು
* ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ತಿದ್ದುಪಡಿ) ಮಸೂದೆ, 2019
* ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆ, 2019
* ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019
* ಅಂತರ್ ರಾಜ್ಯ ನದಿ ವಿವಾದ (ತಿದ್ದುಪಡಿ) ಮಸೂದೆ, 2019
* ಅಣೆಕಟ್ಟು ಸುರಕ್ಷತಾ ಮಸೂದೆ, 2019
* ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಮಸೂದೆ, 2019
* ಜಲಿಯನ್ ವಾಲಾಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ, 2019
* ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ, 2019
* ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ಎರಡನೆಯ ತಿದ್ದುಪಡಿ) ಮಸೂದೆ, 2019
ಪರಿಗಣಿಸಬೇಕಾದ ಹೊಸ ಮಸೂದೆಗಳು
* ಕೀಟನಾಶಕ ನಿರ್ವಹಣೆ ಮಸೂದೆ, 2019
* ಪಾಪರಿಕೆ ಮತ್ತು ದಿವಾಳಿತನದ (ಎರಡನೆಯ) ತಿದ್ದುಪಡಿ ಮಸೂದೆ, 2019
* ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ ಮಸೂದೆ, 2019
* ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ, 2019
* ಪೌರತ್ವ (ತಿದ್ದುಪಡಿ) ಮಸೂದೆ, 2019
* ವೈಯಕ್ತಿಕ ಮಾಹಿತಿ ಸಂರಕ್ಷಣೆ ಮಸೂದೆ, 2019
* ಶಸ್ತ್ರಾಸ್ತ್ರ ಕಾಯ್ದೆ (ತಿದ್ದುಪಡಿ) ಮಸೂದೆ, 2019
ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರ
ರಾಜ್ಯಸಭೆಯಲ್ಲಿ ಬಾಕಿ ಇರುವ ಮಸೂದೆಗಳು
* ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019
* ಅಂತರ್ ರಾಜ್ಯ ನದಿ ವಿವಾದಗಳ (ತಿದ್ದುಪಡಿ) ಮಸೂದೆ, 2019
* ಭಾರತೀಯ ರಾಷ್ಟ್ರೀಯ ಔಷಧ ವ್ಯವಸ್ಥೆಯ ಆಯೋಗದ ಮಸೂದೆ (ಎನ್ಸಿಐಎಂ), 2019
* ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಮಸೂದೆ, 2019
* ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಾಹಸೋದ್ಯಮ ಮತ್ತು ನಿರ್ವಹಣೆ ಮಸೂದೆ ಸಂಸ್ಥೆ ಮಸೂದೆ, 2019
* ಅಣೆಕಟ್ಟು ಸುರಕ್ಷತಾ ಮಸೂದೆ, 2019
* ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಮಸೂದೆ, 2019
* ಜಲಿಯನ್ ವಾಲಾಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ, 2019
* ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಮಸೂದೆ, 2019
* ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ಎರಡನೆಯ ತಿದ್ದುಪಡಿ) ಮಸೂದೆ, 2019
ರಾಜ್ಯಸಭೆಯಿಂದ ಹಿಂಪಡೆಯಬೇಕಿರುವ ಮಸೂದೆಗಳು
* ಭಾರತೀಯ ವೈದ್ಯಕೀಯ ಸಮಿತಿ (ತಿದ್ದುಪಡಿ) ಮಸೂದೆ, 1987
* ಭಾರತೀಯ ಔಷಧ ಮತ್ತು ಹೋಮಿಯೋಪಥಿ ಫಾರ್ಮಸಿ ಮಸೂದೆ, 2005
* ಕೀಟನಾಶಕ ನಿಯಂತ್ರಣ ಮಸೂದೆ, 2008
* ರಾಷ್ಟ್ರೀಯ ಮಾನವ ಸಂಪನ್ಮೂಲ ಆಯೋಗದ ಆರೋಗ್ಯ ಮಸೂದೆ, 2011
* ರಾಷ್ಟ್ರೀಯ ವೈದ್ಯಕೀಯ ಸಮಿತಿ (ತಿದ್ದುಪಡಿ) ಮಸೂದೆ 2013
* ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ ಮಸೂದೆ 2019
* ಜಮ್ಮು ಮತ್ತು ಕಾಶ್ಮೀರ ಮೀಸಲು (ಎರಡನೆಯ ತಿದ್ದುಪಡಿ) ಮಸೂದೆ 2019