Winter Session Day 15 Roundup: ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 17: ಸಂಸತ್ ಚಳಿಗಾಲದ ಅಧಿವೇಶನದ 15ನೇ ದಿನ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ವಿರೋಧಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಅಮಾನತುಗೊಂಡಿರುವ 12 ಮಂದಿ ಸಂಸದರು ಸಂಸತ್ ಆವರಣದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ವಿಲೀನಗೊಳಿಸುವ ಕುರಿತು ಪ್ರತಿಭಟನೆ ನಡೆಸಿದರು. ಸಂಸತ್ ಚಳಿಗಾಲದ ಅಧಿವೇಶನ ನವೆಂಬರ್ 29ರಿಂದ ಶುರುವಾಗಿದ್ದು, ಡಿಸೆಂಬರ್ 23ರವರೆಗೆ ನಡೆಯಲಿದೆ.
ಸಂಸದರ ಅಮಾನತು ವಿಚಾರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ಒಮ್ಮತಕ್ಕೆ ಬರುವಂತೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಒತ್ತಾಯಿಸುವುದರೊಂದಿಗೆ ಶುಕ್ರವಾರದ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಯಿತು. ಪಟ್ಟಿ ಮಾಡಲಾದ ಪತ್ರಗಳ ಮಂಡನೆ ನಂತರ ಸಭಾಪತಿ ಅವರು ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ಸದಸ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸುವಂತೆ ಕೇಳಿದ್ದಾರೆ.
ಇಂದು ನಾನು ಸದನದ ನಾಯಕ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಸದನವನ್ನು ಎಂದಿನಂತೆ ಕಾರ್ಯನಿರ್ವಹಿಸುವಂತೆ ಮಾಡಲು, ದಯವಿಟ್ಟು ಒಂದು ರೀತಿಯ ಒಮ್ಮತಕ್ಕೆ ಬರಲು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ನಡುವೆ ಚರ್ಚೆಗೆ ಅನುಕೂಲವಾಗುವಂತೆ, ಸೋಮವಾರ ಸಭೆ ನಡೆಸಲು ನಾನು ಸದನವನ್ನು ಮುಂದೂಡುತ್ತಿದ್ದೇನೆ ಎಂದು ಘೋಷಿಸಿದರು. ಕಳೆದ ಕೆಲವು ದಿನಗಳಿಂದ ವಿರೋಧ ಪಕ್ಷ ನಾಯಕರು ಒಂದಲ್ಲಾ ಒಂದು ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಸದರ ಅಮಾನತು ಕ್ರಮವು ಪ್ರಜಾಪ್ರಭುತ್ವ ವಿರೋಧಿ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ, ಆದರೆ ಸರ್ಕಾರವು ಅವರ ವರ್ತನೆಗೆ ಮೊದಲು ಕ್ಷಮೆಯಾಚಿಸಬೇಕೆಂದು ಬಯಸುತ್ತಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅ. 3ರಂದು ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿ ಕೊಂದ ಆರೋಪದಡಿ ಬಂಧಿತನಾಗಿರುವ ಪ್ರಮುಖ ಆರೋಪಿ ಆಶೀಶ್ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿ ವಿರೋಧಪಕ್ಷಗಳ ಪ್ರತಿಭಟನೆ ಗುರುವಾರವೂ ಮುಂದುವರಿದಿದೆ.
ಅಜಯ್ ಅವರನ್ನು ವಿಪಕ್ಷಗಳು 'ಕ್ರಿಮಿನಲ್' ಎಂದು ಕರೆದಿವೆ. ಆದರೆ ಅಜಯ್ ಮಿಶ್ರಾ ಅವರ ರಾಜೀನಾಮೆ ಪಡೆಯುವುದಿಲ್ಲ, ಅವರನ್ನು ವಜಾಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಕಡ್ಡಿಮುರಿದಂತೆ ಹೇಳಿದೆ. ಸಂಸತ್ನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಸಚಿವರು ರಾಜೀನಾಮೆ ನೀಡಲೇಬೇಕು. ಅವರೊಬ್ಬ ಕ್ರಿಮಿನಲ್' ಎಂದು ಆರೋಪಿಸಿದರು. 'ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕು. ಅದರಲ್ಲಿ ಸಚಿವರ ಪಾತ್ರ ಇತ್ತು ಮತ್ತು ಅದೊಂದು ಸಂಚು ಎಂದು ಹೇಳಲಾಗುತ್ತಿದೆ' ಎಂದು ರಾಹುಲ್ ಹೇಳಿದ್ದಾರೆ.
ಮಗ ಮಾಡಿರುವ ಕೃತ್ಯಗಳಿಗಾಗಿ ತಂದೆಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ, ಅಜಯ್ ಮಿಶ್ರಾ ಅವರಿಂದ ರಾಜೀನಾಮೆ ಪಡೆಯುವುದು ಅಥವಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.