ಚೀನಾ ತೆಗೆದುಕೊಂಡಿರುವ ನಿರ್ಧಾರದಿಂದ ಗಡಿಯಲ್ಲಿ ಶಾಂತಿಗೆ ಭಂಗವಾಗಿದೆ: ಮುರಳೀಧರನ್
ನವದೆಹಲಿ,ಫೆಬ್ರವರಿ 04: ಚೀನಾ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಗಡಿಯಲ್ಲಿ ಶಾಂತಿಯೇ ಇಲ್ಲದಂತಾಗಿದೆ ಎಂದು ಸಚಿವ ವಿ ಮುರಳೀಧರನ್ ಹೇಳಿದ್ದಾರೆ.
ಪೂರ್ವ ಲಡಾಖ್ನಲ್ಲಿ ವಾಸ್ತವ ಗಡಿ ರೇಖೆಯ ಯಥಾಸ್ಥಿತಿ ಬದಲಿಸುವ ಚೀನಾ ಯತ್ನವು ಗಡಿಯಲ್ಲಿ ನೆಮ್ಮದಿಯನ್ನು ಕದಡಿದೆ.ಭಾರತೀಯ ಸೇನೆಯು ಇದಕ್ಕೆ ತಕ್ಕ ಉತ್ತರವನ್ನು ನೀಡಿದೆ, ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.
ವಿದೇಶಗಳಿಗೆ ಚೀನಾದಿಂದ 10 ಮಿಲಿಯನ್ ಕೊರೊನಾ ಲಸಿಕೆ ರಫ್ತು
ಚೀನಾ ಜೊತೆಗಿನ ಭಾರತದ ಬಾಂಧವ್ಯ ಸಂಕೀರ್ಣವಾಗಿದೆ.ಕಳೆದ ಕೆಲ ವರ್ಷಗಳಲ್ಲಿ ಉಭಯ ಕಡೆಯಿಂದಲೂ ತಮ್ಮ ಭಿನ್ನಾಭಿಪ್ರಾಯಗಳು ವಿವಾದವಾಗಿ ಪರಿಣಮಿಸಲು ಒತ್ತು ನೀಡಬಾರದು ಎಂದು ಒಪ್ಪಲಾಗಿತ್ತು. ಆದರೆ ಪೂರ್ವ ಲಡಾಖ್ ಭಾಗದಲ್ಲಿ ಚೀನಾ ಈ ನಿಯಮವನ್ನು ಉಲ್ಲಂಘಿಸಿದೆ.
ಚೀನಾ ಜತೆಗಿನ ಗಡಿ ವಿವಾದ ಕುರಿತು ಲಿಖಿತ ಉತ್ತರ ನೀಡಿರುವ ಅವರು ಎರಡೂ ಕಡೆಯಿಂದಲೂ ನ್ಯಾಯಯುತ, ಸಕಾರಾತ್ಮಕ, ಪರಸ್ಪರ ಒಪ್ಪಿತವಾಗುವ ಪರಿಹಾರವನ್ನು ಮಾತುಕತೆ ಮೂಲಕ ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿದೆ ಎಂದರು.
2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚೀನಾ ಸೇನೆಯು ಯಥಾಸ್ಥಿತಿ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಲು ಅನೇಕ ಬಾರಿ ಪ್ರಯತ್ನ ಮಾಡಿತ್ತು. ಈ ಪ್ರಯತ್ನಗಳಿಗೆ ಸಮರ್ಪಕವಾಗಿ ಉತ್ತರ ನೀಡಲಾಗಿದೆ.