ರಾಜ್ಯಸಭೆ ಗದ್ದಲ: ಉಪವಾಸ ಪ್ರತಿಭಟನೆಗೆ ಮುಂದಾದ ಉಪಾಧ್ಯಕ್ಷ ಹರಿವಂಶ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 22: ರಾಜ್ಯಸಭೆಯಲ್ಲಿ ಭಾನುವಾರ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ವಿರೋಧಪಕ್ಷಗಳ ಸಂಸದರು ತಮ್ಮೊಂದಿಗೆ ಅಶಿಸ್ತಿನಿಂದ ವರ್ತಿಸಿದ್ದನ್ನು ಖಂಡಿಸಿ 24 ಗಂಟೆ ಉಪವಾಸ ನಿರಶನ ನಡೆಸುವುದಾಗಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಸಿಂಗ್ ತಿಳಿಸಿದ್ದಾರೆ.
ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಮಂಗಳವಾರ ಬರೆದಿರುವ ಸುದೀರ್ಘ ಪತ್ರದಲ್ಲಿ ಅವರು, ಭಾನುವಾರ ರಾಜ್ಯಸಭೆಯಲ್ಲಿ ನಡೆದ ಗದ್ದಲದಿಂದಾಗಿ ಎರಡು ರಾತ್ರಿ ತಮ್ಮಿಂದ ನಿದ್ದೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಮುತ್ಸದ್ಧಿತನದ ಸಂಕೇತ: ಟೀ ಕೊಟ್ಟ ಹರಿವಂಶ್ ಅವರನ್ನು ಕೊಂಡಾಡಿದ ಪ್ರಧಾನಿ ಮೋದಿ
'ಪ್ರಜಾಪ್ರಭುತ್ವದ ಹೆಸರಿನಲ್ಲಿ ಸದನದ ಗೌರವಾನ್ವಿತ ಸದಸ್ಯರು ದೈಹಿಕ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಆರೋಪಿಸಿದ್ದಾರೆ.
ಆ ದಿನ ನಡೆದ ಘಟನೆಯ ವಿವರಗಳನ್ನು ಬರೆದಿರುವ ಹರಿವಂಶ್, ತಮ್ಮ ವಿಧೇಯ ಹಿನ್ನೆಲೆಯ ಬಗ್ಗೆ ವಿವರಿಸಿದ್ದಾರೆ. ಬುದ್ಧನಿಂದ ಸ್ಫೂರ್ತಿ ಪಡೆದಿರುವ ತಾವು, ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರಲ್ಲಿ ಸ್ವಯಂ ಶುದ್ಧೀಕರಣದ ಪ್ರೇರಣಿ ಮೂಡುವ ಆಶಯದೊಂದಿಗೆ ಒಂದು ದಿನದ ಉಪವಾಸ ಆಚರಿಸುವುದಾಗಿ ತಿಳಿಸಿದ್ದಾರೆ. ಆದರೆ ರಾಜ್ಯಸಭೆಯ ಕಲಾಪಗಳಿಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಮಸೂದೆ ವಿರುದ್ಧ ಅಹೋರಾತ್ರಿ ಧರಣಿ: ಸಂಸದರಿಗೆ ಟೀ ನೀಡಿದ ರಾಜ್ಯಸಭೆ ಉಪಾಧ್ಯಕ್ಷ
ಎಲ್ಲಿ ನಡೆದ ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಮಾನಸಿಕ ಒತ್ತಡ ಉಂಟಾಗಿದೆ. ನನ್ನ ಮುಂದೆ ನಡೆದ ಘಟನೆಯು ಸದನ ಹಾಗೂ ರಾಜ್ಯಸಭೆ ಅಧ್ಯಕ್ಷ ಸ್ಥಾನದ ಘನತೆಗೆ ಊಹಿಸಲಾಗದ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.