4 ವರ್ಷದಲ್ಲಿ ಬ್ಯಾಂಕ್ಗಳಿಗೆ ವಂಚಿಸಿದ 38 ಮಂದಿ ದೇಶದಿಂದ ಪರಾರಿ
ನವದೆಹಲಿ, ಸೆಪ್ಟೆಂಬರ್ 15: ದೇಶದಲ್ಲಿ 2015ರ ಜನವರಿಯಿಂದ 38 ಮಂದಿ ಬ್ಯಾಂಕುಗಳಿಗೆ ವಂಚನೆ ಎಸಗಿ ಪರಾರಿಯಾದವರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ ಎಂದು ಸಂಸತ್ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಸಂಸದ ಡೀನ್ ಕುರಿಯಾಕೋಸೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ಯ ಖಾತೆ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್, 2015ರ ಜನವರಿ 1ರಿಂದ 2019ರ ಡಿಸೆಂಬರ್ 31 ಅವಧಿವರೆಗೆ ಬ್ಯಾಂಕ್ಗಳಿಂದ ಸಾಲ ಪಡೆದು ವಂಚಿಸಿ ದೇಶದಿಂದ ಪರಾರಿಯಾಗಿರುವ 38 ಮಂದಿಯ ವಿರುದ್ಧ ಸಿಬಿಐ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದೆ ಎಂದು ಹೇಳಿದರು.
ಈ ದೇಶಭ್ರಷ್ಟರು ಎಸಗಿರುವ ವಂಚನೆಯ ಒಟ್ಟು ಮೊತ್ತದ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. 2019ರ ಜನವರಿ 4ರಂದು ಸಂಸತ್ನಲ್ಲಿ ಇದೇ ರೀತಿಯ ಪ್ರಶ್ನೆಗೆ ಜಾರಿ ನಿರ್ದೇಶನಾಲಯದ ಮಾಹಿತಿಯನ್ನು ಉಲ್ಲೇಖಿಸಿದ್ದ ಸರ್ಕಾರ, ಕಳೆದ ಐದು ವರ್ಷಗಳಲ್ಲಿ 27 ಮಂದಿ ಬ್ಯಾಂಕ್ ವಂಚನೆ ಆರೋಪಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿತ್ತು.
ಈ ಸಂಖ್ಯೆ ಈಗ 27 ರಿಂದ 38ಕ್ಕೆ ಏರಿಕೆಯಾಗಿದೆ. ಇವರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 10 ಕೋಟಿ ರೂ ಮೋಸ ಮಾಡಿದ ಸನ್ನಿ ಕಲ್ರಾ ಮತ್ತು ವಿವಿಧ ಬ್ಯಾಂಕ್ಗಳಿಗೆ ಸುಮಾರು 40 ಕೋಟಿ ರೂ ವಂಚಿಸಿದ ವಿನಯ್ ಮಿತ್ತಲ್ರನ್ನು ವಿದೇಶದಿಂದ ಭಾರತಕ್ಕೆ ಕರೆತರಲಾಗಿದೆ. ಆದರೆ ಉಳಿದವರನ್ನು ಇನ್ನೂ ಭಾರತಕ್ಕೆ ತರುವುದು ಸಾಧ್ಯವಾಗಿಲ್ಲ.
ಈ ಸುದೀರ್ಘ ಪಟ್ಟಿಯಲ್ಲಿ 9,000 ಕೋಟಿಗೂ ಅಧಿಕ ವಂಚಿಸಿದ ಆರೋಪ ಹೊಂದಿರುವ ವಿಜಯ್ ಮಲ್ಯ, 12,000 ಕೋಟಿ ವಂಚನೆಯ ಆರೋಪ ಎದುರಿಸುತ್ತಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಕುಟುಂಬ ಹಾಗೂ 15,000 ಕೋಟಿ ವಂಚನೆ ಆರೋಪಿ ಸಂಡೇಸರಾ ಕುಟುಂಬ ಸೇರಿದೆ.