ಕೇಂದ್ರ ಬಜೆಟ್ ಅಧಿವೇಶನದ ಉಭಯ ಕಲಾಪಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ನವದೆಹಲಿ, ಏಪ್ರಿಲ್ 7: ಸಂಸತ್ ಬಜೆಟ್ ಅಧಿವೇಶನವದ ಉಭಯ ಸದನಗಳನ್ನು ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲೇ ಮುಂದೂಡಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನವು ನಿಗದಿಯಂತೆ ಶುಕ್ರವಾರಕ್ಕೆ ಅಂತ್ಯವಾಗಬೇಕಿತ್ತು, ಆದರೆ ಗುರುವಾರವೇ ಸದನಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.
ಲೋಕಸಭೆಯಲ್ಲಿ ಈ ಬಾರಿ ಬಜೆಟ್ ಅಧಿವೇಶನದ 27 ಕಲಾಪಗಳಲ್ಲಿ ಒಟ್ಟು 177 ಗಂಟೆ 50 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಸದನಕ್ಕೆ ತಿಳಿಸಿದರು. ಸಮಾರೋಪದ ಹೇಳಿಕೆಗಳನ್ನು ನೀಡಿದ ಸ್ಪೀಕರ್, ಈ ಅಧಿವೇಶನದಲ್ಲಿ ಸದನವು 129 ಪ್ರತಿಶತ ಉತ್ಪಾದಕತೆಯನ್ನು ದಾಖಲಿಸಿದೆ ಎಂದು ಒತ್ತಿ ಹೇಳಿದರು.
ರಾಷ್ಟ್ರಪತಿ ಚುನಾವಣೆ; ಪ್ರಧಾನಿ ಮೋದಿ ಆಯ್ಕೆ ಯಾರು?
ಸಂಸತ್ತಿನ 2022ರ ಬಜೆಟ್ ಅಧಿವೇಶನದಲ್ಲಿ ಈ ಬಾರಿ ಒಟ್ಟು 13 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ 12 ಮಸೂದೆಗಳು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದರೆ, 1 ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ರಾಜ್ಯಸಭೆ ಕಲಾಪವೂ ಮುಂದೂಡಿಕೆ:
ರಾಜ್ಯಸಭೆಯಲ್ಲೂ ಸದನವನ್ನು ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಮೇಲ್ಮನೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗುವುದು ಎಂದು ಸಭಾಪತಿ ವೆಂಕಯ್ಯ ನಾಯ್ದು ಹೇಳಿದ್ದು, ಸಮಾರೋಪ ಭಾಷಣ ಮಾಡಿದರು. ಇದಕ್ಕೂ ಮೊದಲು ಮೇಲ್ಮನೆಯಲ್ಲಿ ಪ್ರತಿಪಕ್ಷದ ನಾಯಕರು ಪ್ರತಿಭಟನೆ ನಡೆಸಿದರು.
ರಾಜ್ಯಸಭೆಯಲ್ಲಿ ಗುರುವಾರ ಶಿವಸೇನೆ ಸದಸ್ಯರು ಐಎನ್ಎಸ್ ವಿಕ್ರಾಂತ್ ನಿಧಿ ದುರ್ಬಳಕೆ ವಿಚಾರವನ್ನು ಪ್ರಸ್ತಾಪಿಸಿ ಪ್ರತಿಭಟನೆಗೆ ಮುಂದಾದರು. ಸದನದ ಬಾವಿಗಿಳಿದು ಧಿಕ್ಕಾರ ಘೋಷಣೆಗಳನ್ನು ಕೂಗುವುದಕ್ಕೆ ಶುರು ಮಾಡಿದರು. ಶಿವಸೇನೆ ಸದಸ್ಯರ ಪ್ರತಿಭಟನೆಗೆ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಹಾಗೂ ಇತರೆ ಪ್ರತಿಪಕ್ಷ ಸದಸ್ಯರು ಬೆಂಬಲ ನೀಡಿದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ತೀವ್ರಗೊಳ್ಳುತ್ತಿರುವುದರ ಮಧ್ಯೆ ತಮ್ಮ ತಮ್ಮ ಕುರ್ಚಿಗಳಿಗೆ ಹಿಂತಿರುವಂತೆ ಸಭಾಪತಿ ವೆಂಕಯ್ಯ ನಾಯ್ಡು ಸೂಚನೆ ನೀಡಿದರು. ಆದರೆ ಸದಸ್ಯರು ಅದಕ್ಕೆ ಸ್ಪಂದಿಸದಿದ್ದಾಗ ಕಲಾಪದ ವಿದಾಯ ಭಾಷಣವನ್ನು ಮಾಡದೇ ಮೇಲ್ಮನೆಯನ್ನು ಮುಂದೂಡಿಕೆ ಮಾಡಿದರು.
ಏನಿದು ಐ ಐಎನ್ಎಸ್ ವಿಕ್ರಾಂತ್ ನಿಧಿ ದುರ್ಬಳಕೆ ಪ್ರಕರಣ?:
ಕಳೆದ 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಇದೇ ಐಎನ್ಎಸ್ ವಿಕ್ರಾಂತ್ ಬಹುಮುಖ್ಯ ಪಾತ್ರ ವಹಿಸಿತ್ತು. ಆದರೆ ತದನಂತರದ ಐಎನ್ಎಸ್ ನಿರ್ವಹಣೆಯು ಹೊರೆ ಆಗುವುದಕ್ಕೆ ಶುರು ಆಯಿತು. ಈ ಹಿನ್ನೆಲೆ ಐಎನ್ಎಸ್ ನಿರ್ವಹಣೆಗಾಗಿ ಅಭಿಯಾನ ಶುರು ಮಾಡಲಾಗಿತ್ತು. ಅಂಥ ಅಭಿಯಾನದಿಂದಲೇ ಅದೊಂದು ಮ್ಯೂಸಿಯಂ ಆಗಿ ಬದಲಾಯಿತು. ಮುಖ್ಯವಾಗಿ ಉದ್ದೇಶ ಸಾಕಾರಗೊಳ್ಳುವುದಕ್ಕೆ 200 ಕೋಟಿ ರೂಪಾಯಿ ಬೇಕಾಗಿದ್ದರೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಹಣಕಾಸು ಬೆಂಬಲವನ್ನು ನೀಡಲಿಲ್ಲ.
ಭಾರತದ ಐಎನ್ಎಸ್ ವಿಕ್ರಾಂತ್ ಅನ್ನು ಸಂರಕ್ಷಿಸುವ ಉದ್ದೇಶದಿಂದ ದೇಶಾದ್ಯಂತ ಅಭಿಯಾನವನ್ನು ಆರಂಭಿಸಲಾಯಿತು. ಮಹಾರಾಷ್ಟ್ರದ ಸರ್ವಪಕ್ಷಗಳ ನಾಯಕರ ನಿಯೋಗವು ಅಂದಿನ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದರು. ಅಂದು ಕಿರಿಟ್ ಸೋಮಯ್ಯ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು. ವಿಕ್ರಾಂತ್ ಉಳಿಸಿ ಅಭಿಯಾನಕ್ಕಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬರುವಂತೆ ಕರೆ ನೀಡಲಾಗಿತ್ತು.
'Save Vikrant' ಎಂಬ ಬರಹವುಳ್ಳ ಟೀ-ಶರ್ಟ್ ಮತ್ತು ಜೆರ್ಸಿಯನ್ನು ಹಾಕಿಕೊಂಡು ಹಣ ಸಂಗ್ರಹಿಸುವ ಕಾರ್ಯ ಶುರುವಾಯಿತು. ಹಲವು ಮಂದಿ ಈ ಅಭಿಯಾನಕ್ಕಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ನೇರವಾಗಿ ನೀಡಿದ್ದಾರೆ. ಕೆಲವರು ಇತ್ತೀಚೆಗೆ ತಮಗೆ ಕರೆ ಮಾಡಿ ಅಭಿಯಾನಕ್ಕಾಗಿ 5 ರಿಂದ 10 ಸಾವಿರ ರೂಪಾಯಿ ನೀಡಿದ್ದಾಗಿ ಹೇಳಿದ್ದರು. ಆದರೆ ಹೀಗೆ ಸಂಗ್ರಹಿಸಲಾದ 50 ಕೋಟಿಗೂ ಅಧಿಕ ಹಣವನ್ನು ಬಿಜೆಪಿಯ ಸಂಸದ ಕಿರಿಟ್ ಸೋಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.