ಪ್ಯಾರಡೈಸ್ ಪೇಪರ್ಸ್ ಪ್ರಕರಣ: ಸಮಜಾಯಿಷಿ ನೀಡಿದ ಗಣ್ಯರು
ನವದೆಹಲಿ, ನವೆಂಬರ್ 6: ವಿಶ್ವದ ಹಲವು ಖ್ಯಾತನಾಮರ ಹೆಸರನ್ನು ಅವ್ಯವಹಾರದ ತೂಗುಕತ್ತಿಯ ಬಳಿ ನಿಲ್ಲಿಸಿರುವ ಪ್ಯಾರಡೈಸ್ ಪೇಪರ್ಸ್ ಪ್ರಕರಣ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ.
ಇಂಟರ್ನ್ಯಾಶ್ನಲ್ ಕಾನ್ಸರ್ಟಿಯಂ ಆಫ್ ಜರ್ನಲಿಸ್ಟ್ ಎಂಬ ಸಂಘಟನೆ ಹೊರಹಾಕಿದ ಪಾರಡೈಸ್ ಪೇಪರ್ಸ್ ಹೆಸರಿನ ದಾಖಲೆಗಳು, ಹಣಕಾಸಿನ ಅವ್ಯವಹಾರದಲ್ಲಿ ಹಲವು ದಿಗ್ಗಜರ ಹೆಸರನ್ನು ಬಹಿರಂಗಪಡಿಸಿರುವುದನ್ನು ದಿ 'ಇಂಡಿಯನ್ ಎಕ್ಸ್ ಪ್ರೆಸ್ ವರದಿ' ಮಾಡಿತ್ತು.
ಪ್ಯಾರಡೈಸ್ ಪೇಪರ್ಸ್ ಹಗರಣ: ಸಮಜಾಯಿಷಿ ನೀಡಿದ ಸಚಿವ ಜಯಂತ್ ಸಿನ್ಹಾ
ಭಾರತದಲ್ಲಿ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಕೇಂದ್ರ ಮಾಜಿ ಸಚಿವ ಸಚಿನ್ ಪೈಲೆಟ್, ನೀರಾ ರಾಡಿಯಾ, ಸಂಜಯ್ ದತ್ ಪತ್ನಿ ದಿಲ್ನಾಶಿನ್ ಸಂಜಯ್ ದತ್(ಮಾನ್ಯತಾ), ಮುಂತಾದವರ ಹೆಸರು ಕೇಳಿಬಂದಿದೆ.
ಹಗರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜಕೀಯ ನಾಯಕರು ಈ ಕುರಿತು ಸಮಜಾಯಿಷಿ ನೀಡಿದ್ದಾರೆ.
|
ಜಯಂತ್ ಸಿನ್ಜಾ
ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಈ ಕುರಿತು ಸವಿವರ ಮಾಹಿತಿ ನೀಡಿದ್ದೇನೆ. ನಾನು ಯಾವುದೇ ವ್ಯವಹಾರವನ್ನು ಕಾನೂನು ಬಾಹಿರವಾಗಿ ಮಾಡಿಲ್ಲ. ಎಲ್ಲ ವ್ಯವಹಾರಕ್ಕೂ ಸೂಕ್ತ ದಾಖಲೆಗಳಿವೆ ಎಂದಿದ್ದಾರೆ.
ಸಚಿನ್ ಪೈಲೆಟ್
"ನನ್ನ ಹೆಸರು ತಳಕು ಹಾಕಿಕೊಂಡಿರುವ ಕಂಪೆನಿಯನ್ನು ನಾನು 2001 ರಲ್ಲೇ ಬಿಟ್ಟು, ರಾಜೀನಾಮೆ ನೀಡಿದ್ದೇನೆ. ಅದ್ಯಕ್ಕೆ ಆ ಕಂಪೆನಿಗೂ ನನಗೂ ಯಾವುದೇ ಸಂಬಂಧವಿಲ್ಲ, ಆ ಕಂಪೆನಿಯೊಂದಿಗೆ ಯಾವುದೇ ಪಾಲುದಾರಿಕೆಯನ್ನೂ ನಾನು ಹೊಂದಿಲ್ಲ" ಕಾಂಗ್ರೆಸ್ ಸಂಸದ, ಮಾಜಿ ಸಚಿವ ಸಚಿನ್ ಪೈಲೆಟ್ ಪ್ರತಿಕ್ರಿಯಿಸಿದ್ದಾರೆ.
ಕಾರ್ತಿ ಚಿದಂಬರಂ
ಜಿಕಿತ್ಜ ಎಂಬ ಕಂಪೆನಿಯೊಂದಿಗೆ ನಾನು ಶೇರ್ ಹೋಲ್ಡರ್ ಆಗಿಲ್ಲ. ನಾನು ಅಲ್ಲಿ ಒಬ್ಬ ಸ್ವತಂತ್ರ್ ನಿರ್ದೇಶಕ ಅಷ್ಟೇ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.
ಮಾನ್ಯತಾ
ಬಾಲಿವುಡ್ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾ (ದಿಲ್ನಾಶಿನ್ ಸಂಜಯ್ ದತ್) ಅವರು, ನಾನು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ಆದಾಯ ತೆರಿಗೆ ಕಾಯ್ದೆಗೆ ಅನುಗುಣವಾಗಿ ಎಲ್ಲ ವ್ಯವಹಾರಗಳನ್ನು ನಡೆಸಿಕೊಂದು ಬಂದಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಯೂ ನನ್ನ ಬಳಿ ಇವೆ ಎಂದಿದ್ದಾರೆ.