ಭಾರತಕ್ಕೆ ಬರಬೇಕಿದ್ದ ಮತ್ತೊಂದು ರೈಲು ಸ್ಥಗಿತಗೊಳಿಸಿದ ಪಾಕಿಸ್ತಾನ
ನವದೆಹಲಿ, ಆಗಸ್ಟ್ 9: ಸಂಜೋತಾ ಎಕ್ಸ್ಪ್ರೆಸ್ ಬಳಿಕ ಇದೀಗ ಥಾರ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಭಾರತವು ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಸ್ ತೆಗೆದುಕೊಂಡ ಬಳಿಕ, ಭಾರತದ ಜೊತೆಗೆ ಯಾವುದೇ ವ್ಯಾವಹಾರಿಕ ಸಂಬಂಧವಾಗಲಿ ಇನ್ನಿತರೆ ಒಡನಾಟವಾಗಲಿ ಇರಕೂಡದು ಎಂದು ನಿರ್ಧರಿಸಿರುವ ಪಾಕ್ ಸರ್ಕಾರ ಇದೀಗ ರಾಜಸ್ತಾನಕ್ಕೆ ಬರುತ್ತಿದ್ದ ರೈಲುಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲು ಮುಂದಾಗಿದೆ.
5 ತಾಸು ತಡವಾದರೂ ಪಾಕಿಸ್ತಾನದಿಂದ ದೆಹಲಿ ತಲುಪಿದ ಸಂಜೋತಾ ಎಕ್ಸ್ಪ್ರೆಸ್
ಗುರುವಾರ ಸಂಜೋತಾ ಎಕ್ಸ್ಪ್ರೆಸ್ ನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿತ್ತು. ಕೊನೆಗೂ ಐದು ತಾಸುಗಳ ಬಳಿಕ ದೆಹಲಿ ತಲುಪಿದೆ. ಇದೀಗ ರಾಜಸ್ತಾನಕ್ಕೆ ಬರುತ್ತಿದ್ದ ಥಾರ್ ಎಕ್ಸ್ಪ್ರೆಸ್ ಸ್ಥಗಿತಗೊಳಿಸಲು ಮುಂದಾಗಿದೆ.
ಈ ರೈಲು ಮುನಾಬಾವೊ-ಖೋಖ್ರಾಪುರ ನಡುವೆ ಸಂಚರಿಸುತ್ತಿತ್ತು. ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿದ್ದಾರೆ.ಈ ರೈಲು ವಾರಕ್ಕೊಮ್ಮೆ ಸಂಚರಿಸುತ್ತಿತ್ತು. ಭಾರತದ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ಹಿಂದೆಗೆದುಕೊಂಡಿದೆ. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಧಾನಸಭೆ ಇರಲಿದೆ.
ದೆಹಲಿ ಮತ್ತು ಲಾಹೋರ್ಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ನೂರಾರು ಪ್ರಯಾಣಿಕರು ಭದ್ರತಾ ಅನುಮತಿಗಾಗಿ ಹಲವು ಗಂಟೆಗಳ ಕಾಲ ಕಾಯುತ್ತಿದ್ದರು. ಹಲವಾರು ಗಂಟೆಗಳ ನಂತರ, ಲಾಹೋರ್ಗೆ ಸಂಜೋತಾ ಎಕ್ಸ್ಪ್ರೆಸ್ ಸಂಜೆ 6.41 ಕ್ಕೆ ಅತ್ತಾರಿಯಿಂದ ಹೊರಟಿತು.
ಸಂಜೋತಾ ಎಕ್ಸ್ಪ್ರೆಸ್ ಮೂಲಕ ಒಟ್ಟು 117 ಪ್ರಯಾಣಿಕರು ದೆಹಲಿಯನ್ನು ತಲುಪಿದ್ದಾರೆ. ಇವರಲ್ಲಿ 76 ಭಾರತೀಯರು ಮತ್ತು 41 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಸಂಜೋತಾ ಎಕ್ಸ್ಪ್ರೆಸ್ ಅನ್ನು ವಾಗಾ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಮುಂದೆ ಸಾಗಲು ಅವಕಾಶ ಮಾಡಿಕೊಡಲಾಯಿತು.