ಭಾರತದಲ್ಲಿ ಶಾಂತಿ ಕದಡಲು ಪಾಕ್ನಿಂದ ಕುತಂತ್ರ: ಗುಪ್ತಚರ ವರದಿ
ನವದೆಹಲಿ, ಆಗಸ್ಟ್ 03: ಭಾರತದೆಡೆಗೆ ಸ್ನೇಹದ ಹಸ್ತ ಚಾಚುವುದಾಗಿ ಇತ್ತೀಚೆಗೆ ತಾನೆ ಪಾಕಿಸ್ತಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಆದರೆ ಗುಪ್ತಚರ ಮಾಹಿತಿ ಬೇರೆಯದೇ ಕತೆ ಹೇಳುತ್ತಿದೆ.
ಭಾರತದ ಒಳಕ್ಕೆ 600 ಮಂದಿ ಭಯೋತ್ಪಾದಕರನ್ನು ನುಗ್ಗಿಸಲು ಪಾಕ್ ಷಡ್ಯಂತ್ರ ಹೆಣೆದಿದೆಯಂತೆ. ಇದಕ್ಕೆ ಪಾಕ್ ಸೇನೆ ಕೂಡ ಸಾತ್ ನೀಡುತ್ತಿದೆ ಎನ್ನುತ್ತಿದೆ ಗುಪ್ತಚರ ಇಲಾಖೆ.
ಜಮ್ಮು ಮತ್ತು ಕಾಶ್ಮೀರ: ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರ ಬಲಿ
ಗುಪ್ತಚರ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನೆ ಗಡಿಯಲ್ಲಿ ಭದ್ರತೆಯನ್ನು ಬಿಗಿ ಗೊಳಿಸಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಹಿಂಸೆ ಹರಡಲು ಎಲ್ಲ ರೀತಿಯ ತರಬೇತಿ ಪಡೆದ ಬ್ಯಾಟ್ (ಪಾಕಿಸ್ತಾನ ಬಾರ್ಡರ್ ಆಕ್ಷನ್ ಟೀಮ್) ಸದಸ್ಯರು ಇವರಾಗಿದ್ದು, ಈ ತಂಡದಲ್ಲಿ ಪಾಕ್ ಸೈನಿಕರೂ ಇದ್ದಾರೆ ಎಂಬ ಗುಮಾನಿಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.
ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರದ ಗುರೆಜ್ ಸೆಕ್ಟರ್, ಮಚೀಲ್ ವಲಯ, ಕೆರನ್, ತಂಗಧಾರ್, ಉರಿ, ರಾಂಪುರ್, ಪೂಂಚ್, ಕೃಷ್ಣ ಘಾಟಿ, ಬಿಂಬೆರ್ ಗಲಿ, ಹಾಗೂ ಸುಂದರ್ಬನ್ ಪ್ರದೇಶಗಳಲ್ಲಿ ಈಗಾಗಲೇ ಉಗ್ರರ ಚಲನವಲನಗಳು ಕಂಡುಬಂದಿವೆ.
ಪಾಕಿಸ್ತಾನ ಸೇನೆಗೆ ರಬ್ಬರ್ ಸ್ಟಾಂಪ್ನಂತಹಾ ಪ್ರಧಾನಿ ಸಿಗುತ್ತಿರುವುದರಿಂದ ಪಾಕಿಸ್ತಾನ ಭಾರತದ ವಿರುದ್ಧ ದ್ವೇಷ ಸಾಧನೆಗೆ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದು ಗುಪ್ತಚರ ಇಲಾಖೆಯಿಂದ ಬಹಿರಂಗವಾದಂತಾಗಿದೆ.