Breaking: ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ನಿಂದ ಬಂದಿದ್ದ ವ್ಯಕ್ತಿಯ ಬಂಧನ
ನವದೆಹಲಿ, ಜುಲೈ 19: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡಲು ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ರಾಜಸ್ಥಾನದ ಶ್ರೀಗಂಗಾ ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಇಂಟಲಿಜೆನ್ಸ್ ಬ್ಯೂರೋ (ಐಬಿ) ಮತ್ತು ಇತರ ಗುಪ್ತಚರ ಸಂಸ್ಥೆಗಳ ಜಂಟಿ ತಂಡವು ಬಂಧಿತ ಪಾಕಿಸ್ತಾನಿ ಪ್ರಜೆಯನ್ನು ವಿಚಾರಣೆ ನಡೆಸುತ್ತಿದೆ.
"ಜುಲೈ 16 ರಂದು ರಾತ್ರಿ 11 ಗಂಟೆಗೆ ಹಿಂದೂಮಲ್ಕೋಟ್ ಗಡಿ ಬಳಿ ಈ ವ್ಯಕ್ತಿಯನ್ನು ಬಂಧಿಸಲಾಯಿತು ಎಂದು ಹಿರಿಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
'ಗಸ್ತು ತಿರುಗುತ್ತಿದ್ದ ಸೇನಾ ತಂಡಕ್ಕೆ ಈ ವ್ಯಕ್ತಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಲಾಯಿತು. ತಪಾಸಣೆ ವೇಲೆ ಆತನ ಬಳಿಯಿದ್ದ ಬ್ಯಾಗ್ನಲ್ಲಿ 11 ಇಂಚು ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆ, ಆಹಾರ ಮತ್ತು ಮರಳು ಪತ್ತೆಯಾಗಿದೆ. ಆತ ಪಾಕಿಸ್ತಾನದ ಉತ್ತರ ಪಂಜಾಬ್ನಲ್ಲಿರುವ ಮಂಡಿ ಬಹೌದ್ದೀನ್ ನಗರದ ಮೂಲದ ರಿಜ್ವಾನ್ ಅಶ್ರಫ್ ಎಂದು ಗುರುತಿಸಿಕೊಂಡಿದ್ದಾನೆ' ಎಂದು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ, ಬಂಧಿತ ವ್ಯಕ್ತಿ ನೂಪುರ್ ಶರ್ಮಾಳನ್ನು ಪ್ರವಾದಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣ ಅವರನ್ನು ಕೊಲ್ಲಲು ಗಡಿಯನ್ನು ದಾಟಿದ್ದಾಗಿ ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದರು. ತನ್ನ ಕೆಲಸವನ್ನು ಮುಗಿಸುವ ಮೊದಲು ಆತ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಲು ಯೋಜಿಸಿದ್ದರ ಎಂದು ಪೊಲೀಸರು ಹೇಳಿದರು.
"ಹೆಚ್ಚಿನ ತನಿಖೆಗಾಗಿ ನಾವು ಬಂಧಿತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಅಲ್ಲಿಂದ ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ನಾವು ಆರೋಪಿಯ ಬಗ್ಗೆ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೆ ತಿಳಿಸಿದ್ದೇವೆ" ಎಂದರು.
IB, RAW ಮತ್ತು ಮಿಲಿಟರಿ ಗುಪ್ತಚರ ಜಂಟಿ ತಂಡವು ಬಂಧಿತನನ್ನು ವಿಚಾರಣೆ ನಡೆಸುತ್ತಿದೆ.
ಇತ್ತ, ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮಗಳು ಬೇಡ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಕೆಯ ವಿರುದ್ಧ ದಾಖಲಾಗಿರುವ ಅನೇಕ ಎಫ್ಐಆರ್ಗಳನ್ನು ಒಂದೆಡೆ ಸೇರಿಸುವಂತೆ ಆಕೆ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ವಿವಿಧ ರಾಜ್ಯಗಳಿಗೆ ತಿಳಿಸಿದೆ.
ತನ್ನ ವಿರುದ್ಧದ ಎಲ್ಲಾ ಒಂಬತ್ತು ಎಫ್ಐಆರ್ಗಳನ್ನು ಸೇರಿಸಲು ನೂಪುರ್ ಶರ್ಮಾ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 10 ರಂದು ಕೈಗೆತ್ತಿಕೊಳ್ಳಲಿದೆ.