ಇನ್ನು ಬೀಳೋದು 1971ರ ಯುದ್ಧಕ್ಕಿಂತಲೂ ದೊಡ್ಡ ಏಟು: ಪಾಕ್ಗೆ ಭಾರತೀಯ ಸೇನೆ ಎಚ್ಚರಿಕೆ
ನವದೆಹಲಿ, ಸೆಪ್ಟೆಂಬರ್ 4: ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಪ್ರಚೋದನಾಕಾರಿ ದಾಳಿ ನಡೆಸುವ ಜತೆಗೆ, ಅಣ್ವಸ್ತ್ರ ಪ್ರಯೋಗದ ಕುರಿತು ಪ್ರಸ್ತಾಪಿಸುವ ಮೂಲಕ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ ರವಾನಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಮಹಾಪಾತಕದ ಕೃತ್ಯಗಳನ್ನು ನಿಲ್ಲಿಸದೆ ಹೋದಲ್ಲಿ ಆ ದೇಶವನ್ನೇ ಬಲಿಹಾಕುವಂತಹ ಕಠಿಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಎಚ್ಚರಿಸಿದ್ದಾರೆ.
ಕಾಶ್ಮೀರಿ ಯುವಕರೇ ಬಂದೂಕು ಬಿಡಿ, ಉಜ್ವಲ ಭವಿಷ್ಯದತ್ತ ಗಮನಕೊಡಿ: ಸೇನೆಯ ಕಿವಿಮಾತು
ಧಿಲ್ಲೋನ್ ಅವರು ಪಾಕಿಸ್ತಾನಕ್ಕೆ 1971ರ ಯುದ್ಧವನ್ನು ನೆನಪಿಸಿದ್ದಾರೆ. ಈ ಯುದ್ಧದಲ್ಲಿ ಪಾಕಿಸ್ತಾನದ ಹಿಡಿತದಿಂದ ಬಾಂಗ್ಲಾದೇಶ ಸ್ವತಂತ್ರಗೊಂಡಿತ್ತು. 93,000ಕ್ಕೂ ಅಧಿಕ ಪಾಕ್ ಸೈನಿಕರು ಭಾರತದ ಸೇನೆಗೆ ಶರಣಾಗಿದ್ದರು. ಈ ಹೊಡೆತ ತಿಂದ ಬಳಿಕವೂ ನೆರೆಯ ದೇಶ ಇನ್ನೂ ಪಾಠ ಕಲಿತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
''ಪಾಕಿಸ್ತಾನ ಸೇನೆ, ಪಾಕಿಸ್ತಾನ ಅಥವಾ ಐಎಸ್ಐ ತಮ್ಮ ಬಡ ಆರ್ಥಿಕತೆ ಮತ್ತು ಜಾಗತಿಕ ಸಮುದಾಯದಲ್ಲಿನ ಬಡ ರಾಜತಾಂತ್ರಿಕ ಸ್ಥಿತಿ, ತಮ್ಮ ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಮಧ್ಯೆಯೂ ತಮ್ಮ ಸಾಮರ್ಥ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಡಿಗೇಡಿ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುತ್ತಲೇ ಇದೆ. ಪಾಕಿಸ್ತಾನ ಸೇನೆ ಮತ್ತು ಐಎಸ್ಐಗೆ ಬಂದರೆ, ಅವರು ಬೇಕಾದ್ದನ್ನು ಪ್ರಯತ್ನಿಸಲಿ ಅದಕ್ಕೆ ತಕ್ಕ ಕಠಿಣ ಪ್ರತಿಕ್ರಿಯೆ ಪಡೆಯುತ್ತಾರೆ ಮತ್ತು ಅವರ ನಂತರದ ಪೀಳಿಗೆಗಳೂ ನೆನಪಲ್ಲಿ ಇಟ್ಟುಕೊಳ್ಳುವಂತಹ ಪೆಟ್ಟನ್ನು ತಿನ್ನುತ್ತಾರೆ'' ಎಂದು ಹೇಳಿದ್ದಾರೆ.
ಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲ
''ಪಾಕಿಸ್ತಾನ ಸೇನೆಯು 1971ಕ್ಕಿಂತಲೂ ಉತ್ತಮವಾಗಿ, ಬಹುಶಃ ಅವರು ಅರ್ಥ ಮಾಡಿಕೊಳ್ಳದೆಯೇ ಇರುವಂತಹ ಉತ್ತರವನ್ನು ಕಲಿಯುತ್ತದೆ ಎಂದು ಭಾರತೀಯ ಸೇನೆಯ ಪರವಾಗಿ ನಾನು ಖಚಿತಪಡಿಸುತ್ತೇನೆ'' ಎಂದಿದ್ದಾರೆ.