"ಪಾಕ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ"
ನವದೆಹಲಿ, ಮಾರ್ಚ್ 23: ಪಾಕಿಸ್ತಾನ ತನ್ನ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಅದರಲ್ಲೂ ಭಾರತದೊಂದಿಗೆ ಎಲ್ಲಾ ವಿವಾದಗಳನ್ನು ಪರಿಹರಿಸಿಕೊಳ್ಳಲು ಮಾತುಕತೆಯು ಅವಶ್ಯಕವಿದೆ ಎಂದು ಪಾಕಿಸ್ತಾನ ಹೈ ಕಮಿಷನ್ ಮುಖ್ಯಸ್ಥ ಅಫ್ತಾಬ್ ಹಸನ್ ಖಾನ್ ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರ ವಿವಾದದ ವಿಷಯವನ್ನು ಉಲ್ಲೇಖಿಸಿರುವ ಅವರು, ಈ ವಿವಾದವನ್ನು ಮಾತುಕತೆ ಮೂಲಕವಷ್ಟೇ ಪರಿಹರಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ. ಪಾಕಿಸ್ತಾನ ತನ್ನ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಅದು ಶಾಂತಿಯಿಂದ ಮಾತ್ರ ಸಾಧ್ಯವಾಗಲಿದೆ. ಶಾಂತಿ ನೆಲೆಸಬೇಕೆಂದರೆ, ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಅದರಲ್ಲೂ 70 ವರ್ಷಗಳಿಂದಲೂ ವಿವಾದದಲ್ಲಿರುವ ಜಮ್ಮು ಹಾಗೂ ಕಾಶ್ಮೀರ ಸಮಸ್ಯೆಯ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.
2 ವರ್ಷಗಳ ಬಳಿಕ ಜಲ ಹಂಚಿಕೆ ವಿಚಾರವಾಗಿ ಭಾರತ- ಪಾಕಿಸ್ತಾನ ಮಾತುಕತೆ
ಎರಡೂವರೆ ವರ್ಷಗಳ ಬಳಿಕ ನೀರಿನ ಹಂಚಿಕೆ ಕುರಿತು ಭಾರತ-ಪಾಕಿಸ್ತಾನ ಮಂಗಳವಾರ ಮಾತುಕತೆ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನವು ಶಾಶ್ವತ ಸಿಂಧೂ ಆಯೋಗದ ವಾರ್ಷಿಕ ಸಭೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರಾರಂಭಿಸಲಿವೆ.
2019ರಲ್ಲಿನ ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈಗ ಸಭೆ ನಡೆಯುತ್ತಿರುವುದು ಮಹತ್ವ ಪಡೆದಿದೆ.