ಮೋದಿ ಅವರ 'ಎದೆಗಾರಿಕೆ' ಪ್ರಶ್ನೆ ಎತ್ತಿದ ಕಾಂಗ್ರೆಸ್
ಲೇಹ್ (ಜಮ್ಮು), ಆ.13: ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತ ಹುಸಿ ಯುದ್ಧಗಳ ಮೂಲಕ ಕಿರುಕುಳ ನೀಡುತ್ತಿರುವ ಪಾಕಿಸ್ತಾನದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದೆ. ಆದರೆ, ಕಾಂಗ್ರೆಸ್ ಮಾತ್ರ ಮೋದಿ ಅವರ 'ಎದೆಗಾರಿಕೆ'ಯನ್ನು ಪ್ರಶ್ನಿಸಿದೆ.
ಕಳೆದ 60 ದಿನಗಳಲ್ಲಿ ಸುಮಾರು 25 ಬಾರಿ ಪಾಕಿಸ್ತಾನ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಕಿರುಕುಳ ನೀಡುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಬಾರಿ ಉಗ್ರರು ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ. 56 ಇಂಚಿನ ಎದೆಯುಳ್ಳ ವ್ಯಕ್ತಿಯ ಎದೆಗಾರಿಕೆ ನಾವು ಕಾಣಬೇಕಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಕಿಡಿಕಾರಿದ್ದಾರೆ.['ಕೇಸರಿ ಕ್ರಾಂತಿ'ಗೆ ಕರೆ ನೀಡಿದ ಮೋದಿ]
ಭಾರತದ ವಿರುದ್ಧ ಸಾಂಪ್ರದಾಯಿಕ ಯುದ್ಧ ನಡೆಸಲು ಪಾಕಿಸ್ತಾನ ಸಮರ್ಥವಾಗಿಲ್ಲ. ಆದರೆ, ತನ್ನ ಈ ಕಿರುಕುಳದ ಯುದ್ಧವನ್ನು ಭಯೋತ್ಪಾದನೆ ಮೂಲಕ ನಡೆಸುತ್ತಿದೆ ಎಂದು ಮೋದಿ ಹರಿಹಾಯ್ದಿದ್ದರು. ಜಮ್ಮು ಮತ್ತು ಕಾಶ್ಮೀರದ ಪ್ರವಾಸ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಅಡಿಪಾಯ ಕಾರ್ಯಕ್ರಮಗಳನ್ನು ನೆರವೇರಿಸಿದ ಮೋದಿ ಅವರು ಲೇಹ್ನಲ್ಲಿ ಗಡಿ ಭದ್ರತಾ ಪಡೆಯ ಯೋಧರನ್ನುದ್ದೇಶಿಸಿ ಮಾತನಾಡಿ, ಯೋಧರಿಗೆ ನೈತಿಕ ಸ್ಥೈರ್ಯ ತುಂಬಿದ್ದರು.
ಕಾರ್ಗಿಲ್ ಗೆ ಬಂದ ಮೋದಿ ಬಗ್ಗೆ ಸುಳ್ಳು ವರದಿ
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ನಂತರದ ದಿನಗಳಲ್ಲಿ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಯಾಚಿನ್ಗೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಕಾಂಗ್ರೆಸ್ ಅಲ್ಲಗೆಳೆದಿದೆ. 2005ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು ಭಾರತದ ಗಡಿಗೆ ಬಂದು ಹೋಗಿದ್ದರು ಎಂದಿದೆ.
ಮೋದಿಗೆ ಕಣಿವೆ ರಾಜ್ಯದಲ್ಲಿ ಒಳ್ಳೆ ಸ್ವಾಗತ
ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎರಡನೆ ಬಾರಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಎನ್.ಎನ್.ಒಹ್ರಾ, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹಾಗೂ ಸೇನಾ ನಾಯಕ ದಲಬೀರ್ಸಿಂಗ್ ಸುಹಾಗ್ ಮತ್ತಿತರರು ಆತ್ಮೀಯವಾಗಿ ಸ್ವಾಗತಿಸಿದರು. ಈ ಮುಂಚೆ ವೈಷ್ಣೋದೇವಿ ನೇರ ಸಂಪರ್ಕ ಒದಗಿಸುವ ರೈಲು ಚಾಲನೆ ನೀಡಲು ಮೋದಿ ಬಂದಿದ್ದರು.
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೋದಿ ಚಾಲನೆ
ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳ ಬಹು ದಿನಗಳ ಬೇಡಿಕೆಗಳಾದ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಹಾಗೂ ಶಾಂತಿಯುತ ಬದುಕು ಒದಗಿಸಲು ಕೇಂದ್ರ ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದ ಪ್ರಧಾನಿ ಮೋದಿ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಮೋದಿ ಪುನರುಚ್ಚರಿಸಿದರು.
ನಿಮಗೆ ನನ್ನ ಸೇವೆಯನ್ನು ಅರ್ಪಣೆ ಎಂದ ಮೋದಿ
ದೇಶವು ಭಾರೀ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ನಮ್ಮ ಸರ್ಕಾರ ಅದರ ವಿರುದ್ಧ ಹೋರಾಟ ನಡೆಸುತ್ತಿದೆ. ಜನ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಇಲ್ಲಿನ ಜನತೆಯ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ಆ ಕಷ್ಟಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ನನ್ನ ಸರ್ಕಾರ ಬದ್ಧವಾಗಿದೆ. ನಾನು ಚುನಾವಣೆ ನಂತರ ಎರಡನೆ ಬಾರಿ ಜಮ್ಮು-ಕಾಶ್ಮೀರಕ್ಕೆ ಬರುತ್ತಿದ್ದು, ನಿಮ್ಮ ಪ್ರೀತಿ ನನ್ನನ್ನು ಇಲ್ಲಿಗೆ ಕರೆತಂದಿದೆ. ನಿಮಗೆ ನನ್ನ ಸೇವೆಯನ್ನು ಅರ್ಪಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸಲು ನಾವು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಅಭಿವೃದ್ಧಿಯ ಅಡಿಪಾಯವೇ ಉತ್ತಮ ಸಂಪರ್ಕ ಸಾಧನೆ ಎಂದು ಮೋದಿ ಹೇಳಿದರು.
ಹೊಸ ಭರವಸೆ ತುಂಬಿದ ಮೋದಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಮೂರು ಸಂಸತ್ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯದ ಜನ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬ ನಿರೀಕ್ಷೆ, ಭರವಸೆಗಳನ್ನಿಟ್ಟುಕೊಂಡಿದ್ದಾರೆ.