ಬಂಧನದ ಬಗ್ಗೆ ಪಿ.ಚಿದಂಬರಂ ವಕೀಲರು ಹೇಳಿದ್ದೇನು?
ನವದೆಹಲಿ, ಆಗಸ್ಟ್ 21: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ ಅವರ ವಕೀಲ ಅಭಿಶೇಕ್ ಸಿಂಘ್ವಿ ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದಿದ್ದಾರೆ.
ಸಿಬಿಐ ಮತ್ತು ಇಡಿ ಇಂದು ವರ್ತಿಸಿದ ರೀತಿ ನೋಡಿದರೆ ಪ್ರಕರಣದ ಹಿಂದಿನ ಕತೆ ಏನೆಂದು ಊಹೆ ಮಾಡಿಕೊಳ್ಳಬಹುದು. ಎಫ್ಐಆರ್ನಲ್ಲಿ ಹೆಸರೇ ಇಲ್ಲ, ಆರೋಪಿಯೇ ಅಲ್ಲದ, ಸಿಬಿಐ ಈ ವರೆಗೆ ನೀಡಿರುವ ಎಲ್ಲ ಸಮನ್ಸ್ ಗೂ ಉತ್ತರಿಸಿ ಹಾಜರಾಗಿರುವ, ದೆಹಲಿಯ ತನ್ನ ನಿವಾಸದಲ್ಲೇ ಇರುವ ವ್ಯಕ್ತಿಯೊಬ್ಬರನ್ನು ಬಂಧಿಸಲು ಸಿಬಿಐ ತೋರಿಸಿದ ಆತುರ ಅನುಮಾನ ಉಂಟು ಮಾಡುತ್ತಿದೆ ಎಂದು ಅಭಿಶೇಕ್ ಸಿಂಘ್ವಿ ಹೇಳಿದರು.
ಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮ
ಅಷ್ಟೆ ಅಲ್ಲದೆ, ಅವರು ತಲೆಮರೆಸಿಕೊಂಡಿದ್ದಾರೆ ಎಂದು ಸಾಬೀತು ಮಾಡುವ ದೊಡ್ಡ ಪ್ರಯತ್ನವನ್ನೂ ಕೆಲವು ಮಾಧ್ಯಮಗಳು ಮಾಡಿದವು. ಅವರು ತಲೆಮರೆಸಿಕೊಂಡಿರಲಿಲ್ಲ, ನಮ್ಮೊಂದಿಗೆ ಮುಂದಿನ ನಡೆಗಳನ್ನು ಚರ್ಚಿಸುತ್ತಿದ್ದರು. ಅಂತಿಮವಾಗಿ ತಲೆ ಎತ್ತಿಕೊಂಡೇ ಅವರು ಸುದ್ದಿಗೋಷ್ಠಿ ನಡೆಸಿದರು. ತಾನು ತಪ್ಪು ಮಾಡಿಲ್ಲವೆಂಬುದು ಅವರಿಗೆ ಖಾತ್ರಿ ಇದೆ ಹಾಗಾಗಿಯೇ ಅವರು ಸುದ್ದಿಗೋಷ್ಠಿ ನಡೆಸಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದರು ಎಂದರು.
ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಈ ಬಗ್ಗೆ ನ್ಯಾಯಾಧೀಶರೇ ತೀರ್ಪು ನೀಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಇದು ಚಿದಂಬರಂ ಅವರಿಗೆ ಪ್ರಕರಣ ಮಾತ್ರವಲ್ಲ ಇದು ಅವರಿಗೆ ಹೋರಾಟ ಇದರಲ್ಲಿ ಅವರು ಗೆಲ್ಲಲಿದ್ದಾರೆ ಎಂದರು.
LIVE: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಬಂಧನ
ನಾವು ಕೇವಲ ಅವರ ವಕೀಲರಾಗಿ ಅಲ್ಲ, ವ್ಯಕ್ತಿಯಾಗಿಯೂ ಅವರ ಜೊತೆಗೆ ಇದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಚಿದಂಬರಂ ಅವರಿಗೆ ನ್ಯಾಯ ದೊರಕಲಿದೆ ಎಂದು ಅಭಿಶೇಕ್ ಸಿಂಘ್ವಿ ಹೇಳಿದರು.