ಭಾರತದಲ್ಲಿ ಕೊವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆ ಆತಂಕ
ನವದೆಹಲಿ, ಸಪ್ಟೆಂಬರ್,13: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆಮ್ಲಜನಕದ ಪೂರೈಕೆ ಪ್ರಮಾಣವನ್ನು ಹೆಚ್ಚಿಸಬೇಕಾದ ಆತಂಕ ಎದುರಾಗಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
ದೇಶದಲ್ಲಿ ಪ್ರತಿನಿತ್ಯ 90,000ಕ್ಕಿಂತಲೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಭಾನುವಾರ 94372 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 47,54,357ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ 24 ಗಂಟೆಯಲ್ಲಿ 94,372 ಹೊಸ ಕೋವಿಡ್ ಪ್ರಕರಣ
66,76,601 ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪ್ರಕರಣಗಳ ಪಟ್ಟಿಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದರೆ, ಭಾರತವು ಎರಡನೇ ಸ್ಥಾನದಲ್ಲಿದೆ. ಇನ್ನು, ದೇಶದಲ್ಲಿ ಕೊವಿಡ್-19ನಿಂದ 78614 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಭಾರತದಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣ:
ವಿಶ್ವದಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಪ್ರತಿನಿತ್ಯ ಭಾರತದಲ್ಲೇ ವರದಿಯಾಗುತ್ತಿವೆ. ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಮಹಾಮಾರಿ ಅಟ್ಟಹಾಸ ತೋರುತ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. 10 ಲಕ್ಷಕ್ಕಿಂತ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ವಿಶ್ವದಲ್ಲೇ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ಎಂದು ಮಹಾರಾಷ್ಟ್ರ ಗುರುತಿಸಿಕೊಂಡಿದೆ. ಕಳೆದೊಂದು ವಾರಗಳಲ್ಲಿ ಏರಿಕೆಯಾದ ಸೋಂಕಿತ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಆಮ್ಲಜನಕ ಪೂರೈಕೆ ಅಭಾವ ಎದುರಾಗಿದೆ.
"ಭಾರತದ ವಾಣಿಜ್ಯ ನಗರಿ ಎನಿಸಿರುವ ಮುಂಬೈನಲ್ಲೇ ಇರುವ ಪನ್ವೆಲ್ ಪ್ರದೇಶ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರವಾಗಿದ್ದು, ಅದನ್ನು ಪತ್ತೆ ಮಾಡುವುದೇ ಕಷ್ಟಕರವಾಗುತ್ತಿದೆ ಎಂದು ನಿರಮಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಅಮಿತ್ ಥದಾನಿ ತಿಳಿಸಿದ್ದಾರೆ. ಆಮ್ಲಜನಕ ಭರ್ತಿ ಮಾಡುವ ಕೇಂದ್ರಗಳಲ್ಲಿ ಉತ್ಪಾದಕರಿಂದಲೇ ಆಕ್ಸಿಜನ್ ಪಡೆದುಕೊಳ್ಳಲಾಗುತ್ತಿಲ್ಲ. ಇದರಿಂದ ಸರಬರಾಜು ಪ್ರಮಾಣದಲ್ಲಿ ಅತ್ಯಂತ ಇಳಿಕೆ ಕಂಡು ಬಂದಿದೆ. ಒಂದು ವೇಳೆ 50 ಆಕ್ಸಿಜನ್ ಸಿಲಿಂಡರ್ ಕೇಳಿದರೆ ನಮಗೆ 5 ರಿಂದ 7 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ" ಎಂದು ನಿರಮಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಅಮಿತ್ ಥದಾನಿ ಹೇಳಿದ್ದಾರೆ.