ವಂದೇ ಭಾರತ್ ಮಿಷನ್: ಈವರೆಗೂ 2.5 ಲಕ್ಷ ಭಾರತೀಯರು ವಾಪಸ್
ದೆಹಲಿ, ಜೂನ್ 19: ಕೊರೊನಾ ವೈರಸ್ ಲಾಕ್ಡೌನ್ನಿಂದ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲು ಆರಂಭಿಸಿದ ಯೋಜನೆ ವಂದೇ ಭಾರತ ಮಿಷನ್.
Recommended Video
ಈ ಯೋಜನೆಯಲ್ಲಿ ಒಟ್ಟು 2.5 ಲಕ್ಷ ಭಾರತೀಯರು ಈವರೆಗೂ ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾಹಿತಿ ನೀಡಿದ್ದಾರೆ. ಒಟ್ಟು 4.5 ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ ಬರಲು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರದ ಮಾರ್ಗಸೂಚಿ, ನಿಯಮಗಳ ಅನ್ವಯ 2.5 ಲಕ್ಷ ಜನರನ್ನು ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ವಂದೇ ಭಾರತ್ ಮಿಷನ್ 3: ಸ್ವದೇಶಕ್ಕೆ ಮರಳಲು ಹೆಚ್ಚಿದ ಬೇಡಿಕೆ
ಮೇ 7 ರಂದು ವಂದೇ ಭಾರತ್ ಮಿಷನ್ ಮೊದಲ ಹಂತದ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಮೇ 7ರಿಂದ ಮೇ 15ರವರೆಗೂ ಈ ಆಪರೇಷನ್ ನಡೆಯಿತು. ಬಳಿಕ, ಮೇ 17 ರಿಂದ 22ರ ತನಕ ಎರಡನೇ ಹಂತದ ಕಾರ್ಯಾಚರಣೆ ಮಾಡಲಾಯಿತು. ಬಳಿಕ ಅದನ್ನು ಜೂನ್ 10 ತನಕ ವಿಸ್ತರಣೆ ಮಾಡಲಾಯಿತು.
ವಂದೇ ಭಾರತ್ ಮಿಷನ್ ಮೂರನೇ ಹಂತದ ಆಪರೇಷನ್ ಜೂನ್ 11 ರಂದು ಆರಂಭವಾಗಿದ್ದು, ಜುಲೈ 2ರ ತನಕ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
''ಮೂರನೇ ಹಂತದ ಕಾರ್ಯಾಚರಣೆಯಲ್ಲಿ 191 ಫೀಡರ್ ವಿಮಾನ ಸೇರಿದಂತೆ 550 ವಿಮಾನಗಳು ಸಂಚಾರ ನಡೆಸಲಿದೆ. ಸುಮಾರು 41 ದೇಶಗಳ 55 ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗು 27 ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯಲಿದೆ'' ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೂ ವಂದೇ ಭಾರತ್ ಮಿಷನ್ ಅಡಿಯಲ್ಲಿ 2,50,087 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
''ಭಾರತಕ್ಕೆ ಬಂದವರ ಪೈಕಿ ಶೇಕಡಾ 21 ರಷ್ಟು ವಲಸೆ ಕಾರ್ಮಿಕರಾಗಿದ್ದಾರೆ. 75,000 ಕ್ಕೂ ಹೆಚ್ಚು ಭಾರತೀಯರು ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಭೂ ಗಡಿ ವಲಸೆ ಚೆಕ್ಪೋಸ್ಟ್ಗಳ ಮೂಲಕ ದೇಶಕ್ಕೆ ಮರಳಿದ್ದಾರೆ" ಎಂದು ತಿಳಿಸಿದ್ದಾರೆ.