ಸಲಿಂಗ ವಿವಾಹ ನೋಂದಣಿಗೆ ಕೇಂದ್ರ ಸರ್ಕಾರದ ವಿರೋಧ
ನವದೆಹಲಿ, ಸಪ್ಟೆಂಬರ್.14: ಭಾರತದಲ್ಲಿ ಹಿಂದೂ ವಿವಾಹ ಕಾಯ್ದೆ 1956ರ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಾಟೀಲ್ ಮತ್ತು ನ್ಯಾ. ಪ್ರತೀಕ್ ಜಲನ್ ನೇತೃತ್ವದ ವಿಭಾಗೀಯ ಪೀಠಕ್ಕೆ ಸ್ಯಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ಇದೀಗ ಸಲ್ಲಿಸಿರುವ ಮನವಿಯು ಈಗಾಗಲೇ ಜಾರಿಯಲ್ಲಿಯರುವ ಶಾಸನಬದ್ಧ ನಿಬಂಧನೆಗಳಿಗೆ ವಿರುದ್ಧವಾಗಿ ಎಂದಿದ್ದಾರೆ.
ವೈರಲ್ ಆಯ್ತು ಕೇರಳ ಸಲಿಂಗಿಗಳ ಪ್ರಿ ವೆಡ್ಡಿಂಗ್ ಫೋಟೊಶೂಟ್; ಜೊತೆಗೆ ಪ್ರೀತಿಯ ಸಂದೇಶ
ಸಲಿಂಗ ವಿವಾಹಕ್ಕೆ ನಮ್ಮ ಮೌಲ್ಯಗಳು, ನಮ್ಮ ಕಾನೂನು, ನಮ್ಮ ಸಮಾಜವು ಒಪ್ಪುವುದಿಲ್ಲ. ಅದು ನಮ್ಮ ಸಂಸ್ಕಾರವೂ ಅಲ್ಲ ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ತಿಳಿಸಿದ್ದಾರೆ. ಇದರ ಜೊತೆಗೆ ಹಿಂದೂ ವಿವಾಹ ಕಾಯ್ದೆಯಡಿ ಒಬ್ಬ ಪುರುಷ ಮತ್ತು ಮಹಿಳೆ ನಡುವೆ ನಿಷೇಧಿತ ಸಂಬಂಧವನ್ನು ಮಾತ್ರ ಒಪ್ಪುತ್ತದೆ ಎಂದು ಹೇಳಿದ್ದಾರೆ.
ಸಾಂವಿಧಾನಿಕ ಪೀಠದ ತೀರ್ಪಿನ ಉಲ್ಲೇಖ:
ದೇಶದಲ್ಲಿ ಸಲಿಂಗಕಾಮ ಮತ್ತು ಸಲಿಂಗಕಾಮಿಗಳ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಸಾಂವಿಧಾನಿಕ ತೀರ್ಪಿನ ಬಗ್ಗೆ ತುಷಾರ್ ಮೆಹ್ತಾ ಉಲ್ಲೇಖಿಸಿದರು. ಯಾವುದೇ ಘೋಷಣೆಯ ಅನುಪಸ್ಥಿತಿಯಲ್ಲಿ ಈ ಬಗ್ಗೆ ನೋಂದಣಿಯಾಗಿಲ್ಲ ಎಂದು ಅಭಿಜಿತ್ ಅಯ್ಯರ್ ಮಿತ್ರ ಮತ್ತು ಇತರೆ ಅರ್ಜಿದಾರರು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸಲಿಂಗಕಾಮಿ ಸಂಬಂಧಗಳಿಗೆ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಸಲಿಂಗ ವಿವಾಹದ ನೋಂದಣಿ ನಿರಾಕರಿಸಿದ್ದಲ್ಲಿ ಸಮಾನತೆ ಮತ್ತು ಜೀವಿಸುವ ಹಕ್ಕಿನ ಉಲ್ಲಂಘಿಸಿದಂತೆ ಆಗುತ್ತದೆ ಎಂದು ವಾದಿಸಿದ್ದಾರೆ.
ಅಕ್ಟೋಬರ್ ತಿಂಗಳಿಗೆ ವಿಚಾರಣೆ ಮುಂದೂಡಿಕೆ:
ಸಲಿಂಗ ವಿವಾಹದ ನೊಂದಣಿಯಾಗದ ಕಾರಣಕ್ಕೆ ನೊಂದವರು ಹಾಗೂ ಅಂಥ ನಿದರ್ಶನಗಳ ಬಗ್ಗೆ ದಾಖಲೆಗಳಿದ್ದಲ್ಲಿ ಕೋರ್ಟ್ ಗೆ ಸಲ್ಲಿಸುವಂತೆ ಕೋರ್ಟ್ ಅರ್ಜಿದಾರರಿಗೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ ಗೆ ಮುಂದೂಡಲಾಗಿದೆ.