ಸರ್ಕಾರದ ನೀತಿ ವಿರುದ್ಧದ ಭಿನ್ನಾಭಿಪ್ರಾಯ 'ದೇಶದ್ರೋಹ'ವಲ್ಲ: ಸುಪ್ರೀಂಕೋರ್ಟ್
ನವದೆಹಲಿ, ಮಾರ್ಚ್ 3: ಸರ್ಕಾರದ ಅಭಿಪ್ರಾಯಕ್ಕಿಂತ ವಿಭಿನ್ನ ದೃಷ್ಟಿಕೋನವನ್ನು ಅಭಿವ್ಯಕ್ತಿಸುವುದು ದೇಶದ್ರೋಹವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧದ ಅರ್ಜಿಯನ್ನು ತಳ್ಳಿಹಾಕಿದ ಸಂದರ್ಭದಲ್ಲಿ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಫಾರೂಕ್ ಅಬ್ದುಲ್ಲಾ ನೀಡಿದ್ದ ಹೇಳಿಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಖನ್ನಾ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠ, 'ಸರ್ಕಾರದ ಅಭಿಪ್ರಾಯಕ್ಕಿಂತ ವಿಭಿನ್ನ ಹಾಗೂ ಅಸಮ್ಮತಿಯ ಅಭಿಪ್ರಾಯ ಮಂಡಿಸುವುದನ್ನು ದೇಶದ್ರೋಹ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ' ಎಂದು ತಿಳಿಸಿತು.
ಕೊರೊನಾದಿಂದ ನನ್ನ ಹೆಂಡತಿಗೆ ಮುತ್ತು ಕೊಡಲೂ ಆಗಿಲ್ಲ; ಫಾರೂಖ್ ಅಬ್ದುಲ್ಲಾ
370ನೇ ವಿಧಿಯ ವಿಚಾರವಾಗಿ ಫಾರೂಕ್ ಅಬ್ದುಲ್ಲಾ ಅವರು ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ತಾನಗಳಿಂದ ನೆರವು ಪಡೆದಿದ್ದಾರೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳನ್ನು ಒದಗಿಸುವಲ್ಲಿ ವಿಫಲರಾದ ಅರ್ಜಿದಾರರಿಗೆ ನ್ಯಾಯಪೀಠ 50,000 ರೂ ದಂಡ ವಿಧಿಸಿ, ಅರ್ಜಿಯನ್ನು ವಜಾಗೊಳಿಸಿತು.
370ನೇ ವಿಧಿ ರದ್ದುಗೊಳಿಸಿದ 2019ರ ಆಗಸ್ಟ್ 5ರಿಂದಲೂ ಫಾರೂಕ್ ಅಬ್ದುಲ್ಲಾ ಅವರನ್ನು ಶ್ರೀನಗರದ ಗುಪ್ಕರ್ ರಸ್ತೆಯಲ್ಲಿನ ಅವರ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. 12 ದಿನಗಳ ಆರಂಭದ ಗೃಹ ಬಂಧನದ ನಂತರ ಅದನ್ನು ಡಿಸೆಂಬರ್ 15ರವರೆಗೂ ವಿಸ್ತರಿಸಲಾಗಿತ್ತು. ಪುನಃ ಅದನ್ನು ಮಾರ್ಚ್ 15ರವರೆಗೂ ವಿಸ್ತರಿಸಲಾಗಿತ್ತು. ಇಂತಹ ಬಂಧನವನ್ನು ಗರಿಷ್ಠ 2 ವರ್ಷಗಳವರೆಗೆ ನಡೆಸಲು ಅವಕಾಶವಿದೆ. 2020ರ ಮಾರ್ಚ್ 13ರಂದು ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲಾಗಿತ್ತು.