ಭ್ರಷ್ಟಾಚಾರ ಪ್ರಕರಣ: ಹಿರಿಯ ರಾಜಕಾರಣಿ ಜಯಾ ಜೇಟ್ಲಿಗೆ ಶಿಕ್ಷೆ
ನವದೆಹಲಿ, ಜುಲೈ 30: ರಕ್ಷಣಾ ಇಲಾಖೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಾಗಿದ್ದ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇಬ್ಬರಿಗೆ ಇಂದು ಸಿಬಿಐ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಹಿರಿಯ ರಾಜಕಾರಣಿ ಜಯಾ ಜೇಟ್ಲಿ, ಸಮತಾ ಪಕ್ಷದ ಮಾಜಿ ಸದಸ್ಯ ಗೋಪಾಲ್ ಪಚೇರ್ವಾಲ್, ಮೇಜರ್ ಜನರಲ್ (ನಿವೃತ್ತ) ಎಸ್. ಪಿ ಮುರುಗೈ ಅವರನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ವೀರೇಂದ್ರ ಭಟ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತೆಹೆಲ್ಕಾ ಪ್ರಕರಣದಲ್ಲಿ ರಾಜಕಾರಣಿ ಜಯಾ ಜೇಟ್ಲಿ ದೋಷಿ
ಗುರುವಾರದಂದು ತೀರ್ಪು ಪ್ರಕಟಿಸಿದ ಜಡ್ಜ್ ವೀರೇಂದ್ರ, ಜಯಾ ಜೇಟ್ಲಿ, ಗೋಪಾಲ್ ಪಚೇರ್ವಾಲ್, ಎಸ್. ಪಿ ಮುರುಗೈಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ ಎಂದು ವಕೀಲ ವಿಕ್ರಮ್ ಪನ್ವಾರ್ ಹೇಳಿದರು. ಜೊತೆಗೆ 1 ಲಕ್ಷ ರು ದಂಡ ಹಾಕಲಾಗಿದ್ದು, ಗುರುವಾರ ಸಂಜೆಯೊಳಗೆ ಶರಣಾಗುವಂತೆ ತಪ್ಪಿತಸ್ಥರಿಗೆ ಸೂಚಿಸಲಾಗಿದೆ.
2001ರಲ್ಲಿ ಅನಾಮಧೇಯ ಕಂಪನಿಯೊಂದಕ್ಕೆ ನೆರವಲು ರಕ್ಷಣಾ ಇಲಾಖೆ ಮೂಲಕ ಇವರೆಲ್ಲರೂ ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿ ತೆಹಲ್ಕಾ ಸುದ್ದಿ ಸಂಸ್ಥೆಯು ಆಪರೇಷನ್ ವೆಸ್ಟ್ ಎಂಡ್ ಹೆಸರಿನಲ್ಲಿ ಸುದ್ದಿ ಪ್ರಸಾರ ಮಾಡಿತ್ತು.
ತೆಹೆಲ್ಕಾ ಆಪರೇಷನ್ ವೆಸ್ಟ್ ಎಂಡ್ ನಂತರ ಸಮತಾ ಪಾರ್ಟಿಯ ಮುಖಂಡ ಅಂದಿನ ರಕ್ಷಣಾ ಸಚಿವ ಸ್ಥಾನದಿಂದ ಜಾರ್ಜ್ ಫರ್ನಾಂಡೀಸ್ ಅವರು ಬಲವಂತವಾಗಿ ಕೆಳಗಿಳಿಯಬೇಕಾಗಿತ್ತು. ವೆಸ್ಟ್ ಎಂಡ್ ಇಂಟರ್ ನ್ಯಾಷನಲ್ ಎಂಬ ಕಂಪನಿಯಿಂದ ಜಯಾ ಜೇಟ್ಲಿ 2 ಲಕ್ಷ ರು ಹಾಗೂ ಮುರುಗೈ 20 ಸಾವಿರ ರು ಪಡೆದುಕೊಂಡಿದ್ದರು ಎಂದು ಸಂಸ್ಥೆಯ ಪ್ರತಿನಿಧಿ ಮ್ಯಾಥ್ಯೂ ಸ್ಯಾಮುಯಲ್ ಹೇಳಿಕೆ ನೀಡಿದ್ದಾರೆ.
ತೆಹೆಲ್ಕಾ ಸ್ಟಿಂಗ್ ಆಪರೇಷನ್ ವೆಸ್ಟ್ ಎಂಡ್ ಬಗ್ಗೆ ತಮ್ಮ ಜೀವನ ಚರಿತ್ರೆ ಪುಸ್ತಕದಲ್ಲಿ ವಿಸ್ತಾರವಾಗಿ ಸಮತಾ ಪಾರ್ಟಿಯ ಅಧ್ಯಕ್ಷೆ ಜಯಾ ಜೇಟ್ಲಿ ಬರೆದುಕೊಂಡಿದ್ದಾರೆ.