ಕೇವಲ ಒಂದು ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಸಾವು: ಅಧಿಕೃತ ವರದಿ
ನವದೆಹಲಿ, ಆಗಸ್ಟ್ 11:ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಇದುವರೆಗೆ ಒಂದು ರಾಜ್ಯ ಮಾತ್ರ ಶಂಕಿತ ಸಾವನ್ನು ವರದಿ ಮಾಡಿದೆ.
ಸಂಸತ್ತಿನಲ್ಲಿ ಆಮ್ಲಜನಕದ ಕೊರತೆಯಿಂದ ಸಾವು ವಿಷಯ ಪ್ರಸ್ತಾಪಿಸಿದ ನಂತರ ಕೇಂದ್ರವು ಅಂತಹ ಸಾವು-ನೋವುಗಳ ಬಗ್ಗೆ ದತ್ತಾಂಶವನ್ನು ಕೇಳಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯಿಸಿವೆ.
ಪಂಜಾಬ್ ಮಾತ್ರ ಆಮ್ಲಜನಕದ ಕೊರತೆಯಿಂದ ನಾಲ್ವರು ಶಂಕಿತ ಸಾವನ್ನು ವರದಿ ಮಾಡಿದೆ ಎಂದು ಲವ್ ಅಗರವಾಲ್ ಹೇಳಿದರು.
ಕೊರೋನಾ ಎರಡನೇ ಅಲೆ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.
ಖಾಸಗಿ ಆಸ್ಪತ್ರೆಗಳಲ್ಲೂ ಶಿಕ್ಷಕರಿಗೆ ಕೊವಿಡ್-19 ಲಸಿಕೆ ಉಚಿತ
'ಸಂಸತ್ತಿನಲ್ಲಿ ಪ್ರಶ್ನೆಯನ್ನು ಎತ್ತಿದ ಬಳಿಕ ರಾಜ್ಯಗಳಿಗೆ ಈ ಪ್ರಶ್ನೆಯನ್ನು ನಿರ್ದಿಷ್ಟವಾಗಿ ಕೇಳಲಾಯಿತು. ಅಲ್ಲದೆ ಆ ವರದಿಗಳ ಪ್ರಕಾರ ಕೇವಲ ಒಂದು ರಾಜ್ಯ ಮಾತ್ರ ಶಂಕಿತ ಸಾವನ್ನು ಉಲ್ಲೇಖಿಸಿದೆ.
ಇನ್ನು ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಯಾವ ರಾಜ್ಯವು ಇಲ್ಲಿಯವರೆಗೆ ಹೇಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದರು.
ಕೋವಿಡ್ ಎರಡನೇ ಅಲೆಯ ಹೊತ್ತಿನಲ್ಲಿ ಇಡೀ ದೇಶವೇ ಆಮ್ಲಜನಕದ ಸಿಲಿಂಡರ್ ಕೊರತೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಆಗಿತ್ತು. ಅಲ್ಲದೇ ಇದೆ ವೇಳೆ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟ ಆಮ್ಲಜನಕ ಕೊರತೆಯಿಂದ ಹೆಚ್ಚು ಸಾವು ಸಂಭವಿಸಿವೆ ಹೊರತು ಕೊರೋನಾದಿಂದಲ್ಲ ಎನ್ನುವ ಆರೋಪವನ್ನು ಸಹ ಕೇಂದ್ರ ಬಿಜೆಪಿ ಸರ್ಕಾರ ಹೊರಬೇಕಾಯಿತು.
ಇದಾದ ನಂತರ ಕೇಂದ್ರ ಸರ್ಕಾರವು ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಲೆಕ್ಕವನ್ನು ಕೊಡಬೇಕು ಎಂದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.
ಆದರೆ ಈಗ ಈ ನಿರ್ದೇಶನವು ವಿವಾದದ ಸ್ವರೂಪ ಪಡೆದುಕೊಂಡಿದ್ದು, ''ಆಮ್ಲಜನಕದ ಕೊರತೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಸಾವು ಸಂಭವಿಸಿದೆಯೇ ಎಂದು ವಿಚಾರಿಸುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪತ್ರವನ್ನು ದೆಹಲಿ ರಾಜ್ಯ ಸರ್ಕಾರ ಸ್ವೀಕರಿಸಿಲ್ಲ'', ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಆರೋಪಿಸಿದ್ದಾರೆ.
"ನೀವು ಆ ಉತ್ತರವನ್ನು ಸುಪ್ರೀಂ ಕೋರ್ಟ್ ಮತ್ತು ಸಾರ್ವಜನಿಕರ ಮುಂದೆ ನೀಡಬಹುದು" ಎಂದು ಅವರು ಆನ್ಲೈನ್ ಮೂಲಕ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು. ಎರಡನೇ ಅಲೆಯ ಸಮಯದಲ್ಲಿ ಸಂಭವಿಸಿದ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ ಕೇಂದ್ರವು ಗಂಭೀರವಾಗಿ ವರ್ತಿಸಿದಂತೆ ತೋರುತ್ತಿಲ್ಲ, ಈಗಲೂ ಜನರ ಆರೋಗ್ಯದ ಬಗ್ಗೆ ಗಂಬೀರವಾಗಿ ಓಚಿಸುತ್ತಿಲ್ಲ ಎಂದು ಸಿಸೋಡಿಯಾ ಆರೋಪಿಸಿದರು.
"ಆಮ್ಲಜನಕ ಸಂಬಂಧಿ ಸಾವುಗಳ ಸಂಖ್ಯೆಯನ್ನು ಹಂಚಿಕೊಳ್ಳಲು ರಾಜ್ಯ ಸರ್ಕಾರಗಳನ್ನು ಕೇಳಿದೆ ಎಂದು ಕೇಂದ್ರ ಹೇಳುತ್ತಿದೆ ಎಂದು ನಾನು ಪತ್ರಿಕೆ ವರದಿಗಳಲ್ಲಿ ಓದಿದ್ದೇನೆ" ಎಂದು ಅವರು ವ್ಯಂಗ್ಯವಾಡಿದರು.
ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಂವಹನವನ್ನು ಕೆಂದ್ರ ಸರ್ಕಾರ ನಮ್ಮೊಂದಿಗೆ ನಡೆಸಿಲ್ಲ ಎಂದು ಸಿಸೋಡಿಯಾ ಅವರು ಹೇಳಿದರು.
ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಮಾಹಿತಿ ಕೇಳದೆ ಇರಬಹುದು, ಆದರೆ ನಾವೇ ನಮ್ಮ ಜವಾಬ್ದಾರಿಯನ್ನು ಅರಿತು, ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆಮ್ಲಜನಕ ಪೂರೈಸುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ಸರ್ಕಾರದ ಮಾನ ಹರಾಜಿಗೆ ತಂದಿತ್ತು. ಇದು ಸಾಕಷ್ಟು ದಿನಗಳ ಕಾಲ ಜಟಾಪಟಿಗೂ ಕಾರಣವಾಗಿತ್ತು.