ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳಾ ಸುರಕ್ಷತೆ ಬಗ್ಗೆ ಎರಡೇ ಪ್ರಶ್ನೆ!
ದೆಹಲಿ, ಡಿಸೆಂಬರ್.02: ಹೈದ್ರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾ ಎನ್ನುವಂತಾ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.
ದೇಶದಾದ್ಯಂತ ಮಹಿಳಾ ಸುರಕ್ಷತೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಸಂಸತ್ ನಲ್ಲಿ ಮಾತ್ರ ಮಹಿಳೆಯರ ರಕ್ಷಣೆ ಬಗ್ಗೆ ನಾಯಕರು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ, ಸಂಸತ್ ನಲ್ಲಿ ರಾಷ್ಟ್ರೀಯ ನಾಯಕರೇ ಈ ಬಗ್ಗೆ ಚಕಾರ ಎತ್ತುತ್ತಿಲ್ಲವಂತೆ.
ನನ್ನ ಮಗಳಿಗಾದ ಅನ್ಯಾಯ ಯಾರಿಗೂ ಆಗೋದು ಬೇಡ: ನಿರ್ಭಯಾ ತಾಯಿ
ಹೌದು, ಪ್ರಸ್ತುತ ನಡೆಯುತ್ತಿರುವ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಸಂಸದರು ಪ್ರಶ್ನೆ ಮಾಡಿತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದುವರೆಗೂ ನಡೆದ ಪ್ರಶ್ನಾವಳಿ ಅವಧಿಯಲ್ಲಿ ಉಭಯ ಸದನಗಳಲ್ಲಿ ಈ ಬಗ್ಗೆ ಎರಡು ಬಾರಿಯಷ್ಟೇ ಇಬ್ಬರು ಸದಸ್ಯರು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಳಮನೆಯಲ್ಲಿ ಒಂದೇ ಬಾರಿ ಪ್ರಶ್ನೆ ಕೇಳಿದ ಸದಸ್ಯ
ಸಂಸತ್ ಉಭಯ ಸದನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಎರಡು ಬಾರಿ ಪ್ರಶ್ನೆ ಮಾಡಲಾಗಿದೆ. ಲೋಕಸಭೆಯಲ್ಲಿ ನವೆಂಬರ್.19ರಂದು ಭರ್ತುಹರಿ ಮಹ್ತಬ್ ಹಾಗೂ ರಾಹುಲ್ ರಮೇಶ್ ಶೆವಾಲೆ ಪ್ರಶ್ನೆ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಪ್ರತಿವರ್ಷವೂ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆಯಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ಪ್ರಶ್ನೆ ಮಾಡಿದ್ದರು.
ರಾಜ್ಯಸಭೆಯಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಪ್ರಸ್ತಾಪ
ನವೆಂಬರ್.27ರಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ಸೆಲ್ಜಾ ಅವರು ಸಹ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ದರು. ದೇಶದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆಯೇ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದರು.
ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ತಾಯಿ ಬಳಿ ಸುಳ್ಳು ಹೇಳಿದ್ದ ಆರೋಪಿ
17ರ ಪೈಕಿ 9 ಪ್ರಶ್ನೆಗಳು ಮಹಿಳಾ ಸುರಕ್ಷತೆಗೆ ಮೀಸಲು
ಕಳೆದ ಬಾರಿ ನಡೆದ ಲೋಕಸಭಾ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿದ್ದವು. ಈ ಕುರಿತು ನಾಯಕರೇ ಪ್ರಶ್ನೆ ಎತ್ತಿದ್ದರು. ಅಂದು ಲೋಕಸಭೆ ಕಲಾಪದಲ್ಲಿ ಒಟ್ಟು 17 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪೈಕಿ 9 ಪ್ರಶ್ನೆಗಳು ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದವು.
ಉಭಯ ಸದನಗಳಲ್ಲಿ ಎರಡು ದಿನ ಅದೇ ಚರ್ಚೆ
ಇನ್ನು, ಈ ಸಾಲಿನ ಸಂಸತ್ ಕಲಾಪದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಹೆಚ್ಚು ಚರ್ಚೆಗಳೇ ನಡೆದಿಲ್ಲ. ಹೀಗಾಗಿ ಡಿಸೆಂಬರ್.03 ಹಾಗೂ ಡಿಸೆಂಬರ್.04ರಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಹಿಳಾ ಸುರಕ್ಷತೆಗೆ ಒತ್ತು ನೀಡುವ ದೃಷ್ಟಿಯಿಂದ ಚರ್ಚೆಗಳು ನಡೆಯಬೇಕು ಎಂದು ಉಭಯ ಸದನಗಳಲ್ಲಿ ಸದಸ್ಯರು ಇದೀಗ ಒತ್ತಾಯಿಸುತ್ತಿದ್ದಾರೆ. ತೆಲಂಗಾಣದ ಹೈದ್ರಾಬಾದ್ ನಲ್ಲಿ ನಡೆದ ಘಟನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಖಂಡಿಸಿದ್ದು, ಕಠಿಣ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.