ಶತಕ ಬಾರಿಸಿದ ಈರುಳ್ಳಿ! ಕತ್ತರಿಸುವಾಗಷ್ಟೇ ಅಲ್ಲ, ಕೊಳ್ಳುವಾಗಲೂ ಕಣ್ಣೀರು!
ನವದೆಹಲಿ, ನವೆಂಬರ್ 05: ದಿನಬಳಕೆಗೆ ಅಗತ್ಯವೆನ್ನಿಸಿರುವ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ. ನವೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ.
ಆ ಕಾರಣದಿಂದ ಒಂದು ಕೆಜಿ ಈರುಳ್ಳಿ ಬೆಲೆ ರೂ.90 ರಿಂದ ರೂ.100 ಕ್ಕೇರಿದೆ. ಅತ್ಯಂತ ಹೆಚ್ಚು ಬಳಕೆಯಲ್ಲಿರುವ ತರಕಾರಿಗಳಲ್ಲಿ ಆಲೂಗಡ್ಡೆ ನಂತರದ ಸ್ಥಾನದಲ್ಲಿರುವ ಈರುಳ್ಳಿ ಗ್ರಾಹಕನ ಜೇಬನ್ನು ಸುಡುತ್ತಿದೆ.
ಈರುಳ್ಳಿ ಬೆಳೆದ ರೈತನ ಕಣ್ಣಲ್ಲೇ ನೀರು; ಕಾರಣ ಏನು?
ಕಳೆದ ಹದಿನೈದು ದಿನಗಳ ಹಿಂದೆ ಕೆಜಿ ಈರುಳ್ಳಿಗೆ ರೂ.40 ರಿಂದ ರೂ. 50 ರವರೆಗಿದ್ದ ದರ ಈ ವಾರ ರೂ. 90 ರಿಂದ ರೂ. 100 ಕ್ಕೇರಿದೆ. ರಾಜಧಾನಿ ದೆಹಲಿಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ರೂ.70 ರಿಂದ ರೂ.80 ಕ್ಕೇರಿದೆ.
ಆದರೆ ಈರುಳ್ಳಿ ಬೆಲೆ ಏರಿಕೆಗೆ ಕೇವಲ ಪ್ರವಾಹ ಮತ್ತು ಮಳೆಯಷ್ಟೇ ಕಾರಣವಲ್ಲ. ಸಾಲು ಸಾಲು ಹಬ್ಬಗಳು ಸಹ ಈರುಳ್ಳಿ ಬೆಲೆ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಆದರೆ ಹಬ್ಬಗಳು ಮುಗಿದ ನಂತರವೂ ಬೆಲೆ ಮಾತ್ರ ಕಡಿಮೆಯಾಗದಿರುವುದು ಗ್ರಾಹಕನಿಗೆ ಭಾರೀ ತಲೆನೋವೆನ್ನಿಸಿದೆ.
ಈರುಳ್ಳಿ ವಿಚಾರಕ್ಕೆ ಐವರು ಮಹಿಳೆಯರ ಮಧ್ಯೆ ಹೊಡೆದಾಟ, ಆಸ್ಪತ್ರೆಗೆ ದಾಖಲು
ಈರುಳ್ಳಿಯನ್ನು ಅತೀ ಹೆಚ್ಚು ಬೆಳೆಯಲಾಗುವ ಪ್ರದೇಶ ಮಹಾರಾಷ್ಟ್ರ. ಆದರೆ ಮಹಾರಾಷ್ಟ್ರದಲ್ಲಿ ಈ ಬಾರಿ ಸುರಿದ ಅಕಾಲಿಕ ಮಳೆ ಮತ್ತು ಪ್ರವಾಹದಿಂದಾಗಿ ಬೆಳೆ ಹಾನಿಯಾಗಿದೆ. ನಾಸಿಕ್, ಅಹ್ಮದ್ ನಗರ ಮತ್ತು ಪುಣೆಯಲ್ಲಿ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಹೊಸದಾಗಿ ಬೆಳೆದ ಈರುಳ್ಳಿಯೆಲ್ಲವೂ ಈಗಾಗಲೇ ಹಾಳಾಗಿವೆ ಎಂದು ರೈತರು ಕಂಗಾಲಾಗಿದ್ದಾರೆ.