30 ದಿನಗಳಲ್ಲಿ ಒಬ್ಬ ಸೋಂಕಿತನಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತೆ?
ನವದೆಹಲಿ, ಏಪ್ರಿಲ್.07: ಕೊರೊನಾ ವೈರಸ್ ಒಂದು ಹಂತದಲ್ಲಿದೆ. ಕೊರೊನಾ ವೈರಸ್ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ಕೊರೊನಾ ವೈರಸ್ ಇನ್ನೇನು ಮೂರನೇ ಹಂತಕ್ಕೆ ಕಾಲಿಟ್ಟು ಬಿಡುತ್ತೆ ಎಂದೆಲ್ಲ ಚರ್ಚೆ ನಡೆಸಲಾಗುತ್ತಿದೆ.
ದೇಶವಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಸೋಂಕು ಹರಡುವುದರ ಹಿಂದಿನ ಸೀಕ್ರೆಟ್ ನ್ನು ಐಸಿಎಂಆರ್ ಬಿಚ್ಚಿಟ್ಟಿದೆ. ಒಬ್ಬನೇ ಒಬ್ಬ ಕೊರೊನಾ ವೈರಸ್ ಸೋಂಕಿತನು 30 ದಿನಗಳಲ್ಲಿ ಕನಿಷ್ಛ 406 ಜನರಿಗೆ ಸೋಂಕು ತಗಲಿಸಲು ಸಾಧ್ಯ ಎಂದು ಅಧ್ಯಯನವೊಂದು ತಿಳಿಸಿದೆ.
ಕೊರೊನಾ ಕುರಿತು ಸುಳ್ ಸುದ್ದಿ ನೋಡಿದ್ದೀರಾ ಕೂಡಲೇ ಕಂಪ್ಲೆಂಟ್ ಕೊಡಿ!
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ದೇಶದಲ್ಲಿ ಸೋಂಕು ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ದೇಶ ಲಾಕ್ ಡೌನ್ ಆಗದಿದ್ದರೆ ಹೆಚ್ಚು ಅಪಾಯ
ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಭಾರತ ಲಾಕ್ ಡೌನ್ ತೀರ್ಮಾನ ಉಪಯುಕ್ತವಾಗಿದೆ. ಒಂದು ವೇಳೆ ಲಾಕ್ ಡೌನ್ ಮಾಡದಿದ್ದಲ್ಲಿ ಸೋಂಕಿತರ ಸಂಖ್ಯೆ ಎಲ್ಲೆ ಮೀರಿ ಬೆಳೆಯುತ್ತಿತ್ತು. ಏಕೆಂದರೆ ಒಬ್ಬ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯು 30 ದಿನಗಳಲ್ಲಿ ಕನಿಷ್ಠ 406 ಜನರಿಗೆ ಸೋಂಕು ಹರಡಿಸಲು ಸಾಧ್ಯ ಎಂದು ಐಸಿಎಂಆರ್ ಅಧ್ಯಯನದಿಂದ ತಿಳಿದು ಬಂದಿದೆ.
ಮಾರಕ ಸೋಂಕು ನಿಯಂತ್ರಣಕ್ಕೆ ತಂತ್ರಜ್ಞಾನದ ಬಳಕೆ
ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಮಾಡುವುದು ಮತ್ತು ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವುದಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕಿತ ಶಂಕಿತರ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಲಾವ್ ಅಗರ್ ವಾಲ್ ತಿಳಿಸಿದ್ದಾರೆ.
ಭಾರತದ ಈ ಪ್ರದೇಶಗಳು ಹೆಚ್ಚು ಅಪಾಯಕಾರಿ
ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಪ್ರತಿನಿತ್ಯ ಏರುಮುಖವಾಗುತ್ತಿದ್ದು, ದೇಶದಲ್ಲಿ ಕೆಲವು ಪ್ರದೇಶಗಳನ್ನು ಡೇಂಜರ್ ಝೋನ್ ಎಂದು ಗುರುತಿಸಲಾಗಿದೆ. ವಿಶೇಷವಾಗಿ ಉತ್ತರ ಪ್ರದೇಶದ ಆಗ್ರಾ, ಗೌತಮ್ ಬುದ್ಧ ನಗರ್, ಪತಮ್ ಥಿಟ್ಟ, ಭಿಲ್ವಾರಾ ಮತ್ತು ಪೂರ್ವ ದೆಹಲಿ ಭಾಗದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ಇದ್ದಾರೆ ಎಂದು ಪತ್ತೆ ಮಾಡಲಾಗಿದೆ.
ಮೂರು ಹಂತಗಳಲ್ಲಿ ಕೊರೊನಾ ಸೋಂಕಿತರ ನಿರ್ವಹಣೆ
ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆ ಮತ್ತು ನಿರ್ವಹಣೆಗೆ ಮೂರು ಹಂತಗಳಲ್ಲಿ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕೊರೊನಾ ವೈರಸ್ ಸೋಂಕಿತರಿಗಾಗಿ ಶಾಲಾ-ಕಾಲೇಜು ಮತ್ತು ಹೋಟೆಲ್ ಗಳನ್ನು ದಿಗ್ಬಂಧನ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಒಂದು ಆಸ್ಪತ್ರೆಯನ್ನು ಗುರುತಿಸಲಾಗಿರುತ್ತದೆ. ಸೋಂಕಿತರ ಆರೋಗ್ಯದಲ್ಲಿ ಏರುಪೇರು ಆದರೆ ಅಂಥವರನ್ನು ಆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.
2ನೇ ಹಂತದ ಕೊರೊನಾ ಸೋಂಕಿತರ ಚಿಕಿತ್ಸೆ ವ್ಯವಸ್ಥೆ
ಇನ್ನು, ಎರಡನೇ ಹಂತದ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ನಿರ್ಮಿಸಲಾಗಿದೆ. ಈ ವಾರ್ಡ್ ಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮಾಡಲಾಗಿದ್ದು, ಪ್ರತಿಯೊಬ್ಬ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಐಸೋಲೇಟೆಡ್ ವಾರ್ಡ್ ಹಾಗೂ ಐಸಿಯುನಲ್ಲಿ ವೆಂಟಿಲೇಟರ್ ಸಹಿತ ಚಿಕಿತ್ಸೆಗೆ ಸಿದ್ಧತೆ ಮಾಡಕೊಳ್ಳಲಾಗಿದೆ.