4 ದಿನಕ್ಕೊಮ್ಮೆ ಬ್ರೆಡ್, 2 ವರ್ಷದಿಂದ ಅದೇ ಬಟ್ಟೆ; ಭೂಮಿ ಮೇಲೆ ಹೀಗೊಂದು ನರಕ
ನವದೆಹಲಿ, ಸೆಪ್ಟೆಂಬರ್ 19: ಆಕೆ ಐವತ್ತು ವರ್ಷದ ಮಹಿಳೆ, ದೆಹಲಿ ವಾಯವ್ಯದ ರೋಹಿಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಬದುಕಿದ್ದ ರೀತಿ ಕೇಳಿದರೆ ಎದೆ ನಡುಗಿಹೋಗುತ್ತದೆ. ತನ್ನ ಸ್ವಂತ ಸೋದರನ ಮನೆಯ ಮಹಡಿ ಮೇಲೆ ಆಕೆಯನ್ನು ಅಕ್ಷರಶಃ ಬಿಸಾಡಲಾಗಿತ್ತು. ಏನೋ ಬದುಕಲಿ ಎಂಬ ಕಾರಣಕ್ಕೆ ನಾಲ್ಕು ದಿನಕ್ಕೊಮ್ಮೆ ಒಂದು ತುಂಡು ಬ್ರೆಡ್ ನೀಡಲಾಗುತ್ತಿತ್ತು.
ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕಿದ್ದ ಈ ಮಹಿಳೆಯನ್ನು ಮಂಗಳವಾರ ರಕ್ಷಣೆ ಮಾಡಲಾಗಿದೆ. ತನ್ನದೇ ಮಲ-ಮೂತ್ರಗಳ ಮಧ್ಯೆ ಬಿದ್ದಿದ್ದ ಆಕೆಯನ್ನು ಹಿಂಸಿಸಲಾಗಿದೆ. ದೇಹದ ಮೂಳೆ ಬಿಟ್ಟು ಇನ್ನೇನೂ ಉಳಿದಿಲ್ಲವೇನೋ ಎಂಬ ಸ್ಥಿತಿಯಲ್ಲಿದ್ದ ಆಕೆಯ ರಕ್ಷಣೆ ಮಾಡಲಾಗಿದೆ ಎಂದು ದೆಹಲಿಯ ಮಹಿಳಾ ಆಯೋಗದ ತಂಡ ತಿಳಿಸಿದೆ.
ತಾಯಿಯ ರುಂಡ ಹೊತ್ತೊಯ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಹಳ್ಳಿಗರು
"ಆ ಮಹಿಳೆಗೆ ನಾಲ್ಕು ದಿನಕ್ಕೊಮ್ಮೆ ಸ್ಲೈಸ್ ಬ್ರೆಡ್ ನೀಡಲಾಗುತ್ತಿತ್ತು. ಕುಡಿಯಲು ನೀರು ಕೂಡ ಇರಲಿಲ್ಲ. ಮಳೆಯ ನೀರೇ ಆಕೆಯನ್ನು ಉಳಿಸಿತ್ತು. ಎರಡು ವರ್ಷಗಳಿಂದ ಅದೇ ದಿರಿಸು ಧರಿಸಿದ್ದ ಆ ಮಹಿಳೆ ತನ್ನದೇ ಮಲ-ಮೂತ್ರದ ಮಧ್ಯೆಯೇ ಬಿದ್ದಿದ ಆಕೆಯ ಸ್ಥಿತಿ ಕರುಳು ಹಿಂಡುವಂತಿತ್ತು" ಎಂದು ದೆಹಲಿಯ ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗೇಟ್ ತೆಗೆಯಲು ನಿರಾಕರಣೆ
ಮಹಿಳೆಯ ಹಿರಿಯ ಅಣ್ಣ ಮಹಿಳಾ ಆಯೋಗಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜತೆಗೆ ಮಹಿಳೆಯು ಮಾನಸಿಕವಾಗಿ ಬಹಳ ಕುಗ್ಗಿಹೋಗಿದ್ದಾರೆ ಅಂತಲೂ ತಿಳಿಸಿದ್ದಾರೆ. ಮಹಿಳಾ ಆಯೋಗದಿಂದ ರೋಹಿಣಿ ವಲಯ- 7ರಲ್ಲಿ ಇರುವ ಮನೆಯನ್ನು ಪತ್ತೆ ಹಚ್ಚಲಾಗಿದೆ. ಆ ಮನೆಯ ಬಳೆ ಹೋಗುತ್ತಿದ್ದಂತೆ ಕುಟುಂಬದವರು ಗೇಟ್ ತೆಗೆಯಲು ಕೂಡ ನಿರಾಕರಿಸಿದ್ದಾರೆ. ಆ ಹಂತದಲ್ಲಿ ಪೊಲೀಸರ ಸಹಾಯ ಕೇಳಲಾಗಿದೆ.
ತಾಯಿ ತೀರಿಕೊಂಡ ಮೇಲೆ ತಮ್ಮನ ಮನೇಲಿ ವಾಸ
ಹಲವು ಪ್ರಯತ್ನ ಮಾಡಿ, ಕೊನೆಗೆ ಅಕ್ಕಪಕ್ಕದ ಮನೆಯವರ ಮಹಡಿಯನ್ನು ಏರಿ, ಆ ಮೂಲಕ ಮನೆಯ ಅಟ್ಟಣಿಗೆ ತಲುಪಿದರೆ ಅಲ್ಲಿ ಐವತ್ತು ವರ್ಷದ ಮಹಿಳೆಯು ಕಂಡುಬಂದಿದ್ದಾರೆ. ಈಕೆ ಮೊದಲಿಗೆ ತನ್ನ ಪೋಷಕರ ಜತೆಗೆ ವಾಸವಿದ್ದರು. ಆಕೆಯ ತಾಯಿ ತೀರಿಕೊಂಡ ನಂತರ ತನ್ನ ತಮ್ಮನ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಮಹಿಳೆ ದಾಖಲು
ಆ ಮಹಿಳೆಯ ಸೋದರ ಹಾಗೂ ಆತನ ಹೆಂಡತಿ ಸೇರಿ ಯಾರಿಗೂ ಆ ಮಹಿಳೆಯನ್ನು ಭೇಟಿ ಆಗಲು ಬಿಡುತ್ತಿಲ್ಲ ಎಂದು ದೂರು ನೀಡಿದ ವ್ಯಕ್ತಿ ಆರೋಪಿಸಿದ್ದಾರೆ. ರೋಹಿಣಿ ವಲಯ- 7ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
50 ವರ್ಷದ ಮಹಿಳೆ 90 ವರ್ಷಕ್ಕೂ ಹೆಚ್ಚಾದವರ ಥರ ಕಾಣುತ್ತಾರೆ
"ಆ ಮಹಿಳೆಯನ್ನು ಅದೆಷ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದಾರಲ್ಲ ಎಂಬುದೇ ನೋಡಿ ಆಘಾತವಾಯಿತು. ಆಕೆಗೆ 50 ವರ್ಷ ಇರಬಹುದು. ಆದರೆ 90 ವರ್ಷಕ್ಕೂ ಹೆಚ್ಚು ವಯಸ್ಸಾದವರ ಥರ ಕಾಣುತ್ತಾರೆ. ಆಕೆಯ ಹಸಿವು ಮತ್ತೂ ಭಯಾನಕ. ತನ್ನನ್ನು ತಾನು ನೋಡಿಕೊಳ್ಳಲಾಗದ ಸ್ಥಿತಿ ಅವರದು. ನಾನು ಎಲ್ಲ ನಾಗರಿಕರನ್ನು ಕೇಳಿಕೊಳ್ತೀನಿ, ಇಂಥ ಘಟನೆಗಳು ಕಂಡುಬಂದರೆ ಕೂಡಲೇ ತಿಳಿಸಿ. ಆ ಮೂಲಕ ಹೆಚ್ಚು ಯುವತಿಯರನ್ನು ಹಾಗೂ ಮಹಿಳೆಯರನ್ನು ರಕ್ಷಿಸಬಹುದು" ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ ಮನವಿ ಮಾಡಿದ್ದಾರೆ.