ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ಗಳಿಗೆ ಮಲಯಾಳಂ ಮಾತನಾಡದಂತೆ ನಿಷೇಧ
ನವದೆಹಲಿ, ಜೂನ್ 6: ದೆಹಲಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರ್ವಹಿಸುವ ನರ್ಸ್ಗಳು ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆಯನ್ನು ಮಾತನಾಡದಂತೆ ನಿಷೇಧವನ್ನು ಹೇರಲಾಗಿದೆ. ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸದಿರುವುದು ತಿಳಿದು ಬಂದರೆ ಅಂಥ ನರ್ಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ದೆಹಲಿ ಸರ್ಕಾರ ನೀಡಿದೆ ಎಂದು ವರದಿಯಾಗಿದೆ.
"ದಿ ಹಿಂದೂ" ಪತ್ರಿಕೆ ಈ ಬಗ್ಗೆ ವರದಿಯನ್ನು ಮಾಡಿದ್ದು ದೆಹಲಿಯ ಗೋವಿಂದ್ ಬಲ್ಲಭ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರ್ಯಾಜುಯೇಶನ್ ಮಡಿಕಲ್ ಎಜುಕೇಶನ್ & ರಿಸರ್ಚ್(GIPMER) ಹೇಳಿಕೆಯನ್ನು ಬಿಡುಗಡೆ ಮಾಡಿದೆ ಎಂದಿದೆ. ವರದಿಯ ಪ್ರಕಾರ ಆಸ್ಪತ್ರೆಯ ಹೇಳಿಕೆಯಲ್ಲಿ "ಆಸ್ಪತ್ರೆಯ ಕರ್ತವ್ಯದ ಸಂದರ್ಭದಲ್ಲಿ ಮಲಯಾಳಂ ಭಾಷೆ ಮಾತನಾಡುವ ವಿಚಾರವಾಗಿ ದೂರುಗಳು ಬಂದಿದೆ. ಇಲ್ಲಿನ ಬಹುತೇಕ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಮಲಯಾಳಂ ಭಾಷೆ ಬಾರದ ಕಾರಣ ಅಸಹಾಯಕತೆ ಉಂಟಾಗುತ್ತಿದ್ದು ಸಾಕಷ್ಟು ಅನಾನುಕೂಲಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲಾ ನರ್ಸಿಂಗ್ ಸಿಬ್ಬಂದಿಗಳಿಗೆ ಕೇವಲ ಹಿಂದಿ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತ್ರವೇ ಬಳಸಬೇಕೆಂದು ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದಿದೆ.
'ಗಿಪ್ಮರ್'(GIPMER) ಆಸ್ಪತ್ರೆಯ ಈ ನಿರ್ಧಾರ ಅಲ್ಲಿನ ನರ್ಸ್ಗಳು ಹಾಗೂ ದೆಹಲಿಯ ಇತರ ಸರ್ಕಾರಿ ಅಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈ ಆದೇಶವನ್ನು ಕಟು ಮಾತುಗಳಿಂದ ಟೀಕಿಸುತ್ತಿದ್ದಾರೆ.
ಗಿಪ್ಮರ್ ಆಸ್ಪತ್ರೆಯ ನರ್ಸ್ ಒಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ಆಸ್ಪತ್ರೆಯಲ್ಲಿ 300-350 ಮಲಯಾಳಂ ನರ್ಸಿಂಗ್ ಸಿಬ್ಬಂದಿಗಳು ಇದ್ದು ಅವರೆಲ್ಲರೂ ರೋಗಿಗಳೊಂದಿಗೆ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ನಾವು ಮಲಯಾಳಂ ಭಾಷೆಯಲ್ಲಿ ಮಾತನಾಡಿದರೆ ಆ ರೋಗಿಗಳಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೀರಾ? ಆದರೆ ಈಗ ನಮ್ಮೊಳಗೆ ಮಲಯಾಳಂ ಭಾಷೆಯನ್ನು ಮಾತನಾಡಬಾರದು ಎಂದಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.
Delhi's Govind Ballabh Pant Institute of Post Graduate Medical Education & Research withdraws its circular directing nursing staff to communicate only in Hindi/English & disallowing use of Malayalam language. Hosp administration says circular was issued without their information. https://t.co/q0i6gMqO0o
— ANI (@ANI) June 6, 2021
ಇನ್ನು ಈ ವಿಚಾರವಾಗಿ ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಯ ನರ್ಸ್ಗಳ ಕಾರ್ಯದರ್ಶಿ ಜೀಮೋಲ್ ಶಾಜಿ ಮಾತನಾಡಿದ್ದು"ಕೇರಳದಿಂದ ಆಗಮಿಸಿರುವ ನರ್ಸ್ಗಳು ತಮ್ಮ ಮಾತೃ ಭಾಷೆಯನ್ನು ಆಸ್ಪತ್ರೆಯಲ್ಲಿರುವ ಇತರ ಕೇರಳದ ನರ್ಸ್ಗಳೊಂದಿಗೆ ಮಾತ್ರವೇ ಮಾತನಾಡುತ್ತಾರೆ. ಪಂಜಾಬಿಗಳಿಗೆ ತಮ್ಮೊಳಗೆ ಪಂಜಾಬಿ ಭಾಷೆಯಲ್ಲಿ ಮಾತನಾಡದಂತೆ ಸೂಚನೆಯನ್ನು ಅವರು ನೀಡುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ.