ದೆಹಲಿ ಸ್ಫೋಟ ಪ್ರಕರಣ; NSG ಬಾಂಬ್ ಮಾಹಿತಿ ಕೇಂದ್ರದಿಂದ ವಿಶ್ಲೇಷಣೆ
ನವದೆಹಲಿ, ಜನವರಿ 30: ಭಯೋತ್ಪಾದನೆ ಸಂಬಂಧಿ ಸ್ಫೋಟದ ಕುರಿತ ಮಾಹಿತಿ ಸಂಗ್ರಹಣೆ, ಮೌಲ್ಯಮಾಪನ, ವಿಶ್ಲೇಷಣೆ ನಡೆಸುವ ರಾಷ್ಟ್ರೀಯ ಭದ್ರತಾ ಪಡೆಯ ಬಾಂಬ್ ಮಾಹಿತಿ ಕೇಂದ್ರದ ತಂಡ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಸಂಭವಿಸಿದ ಸ್ಫೋಟದ ಕುರಿತು ವಿಶ್ಲೇಷಣೆ ನಡೆಸಲಿದೆ.
ಸ್ಫೋಟದಲ್ಲಿ ಬಳಸಿದ ವಸ್ತುಗಳ ಪರಿಶೀಲನೆಗೆ ತಂಡ ಈಗಾಗಲೇ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದೆ. ಬೆಳಿಗ್ಗೆ ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದ್ದು, ಲಘು ಸಾಮರ್ಥ್ಯದ ಐಇಡಿಯಲ್ಲಿ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು ಎಂದು ಮಾಹಿತಿ ನೀಡಿದೆ. ಸ್ಫೋಟಕದಲ್ಲಿ ಆರ್ ಡಿಎಕ್ಸ್ ಅಂಶ ಪತ್ತೆಯಾಗಿಲ್ಲ. ಆರ್ ಡಿಎಕ್ಸ್ ಇದ್ದರೆ ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸುತ್ತಿತ್ತು ಎಂದು ಹೇಳಿದೆ.
ದೆಹಲಿ ಸ್ಫೋಟದ ಹಿಂದೆ ಜೈಷ್ ಉಲ್ ಹಿಂದ್?; ಚಾಟ್ ಬೆನ್ನಟ್ಟಿರುವ ತನಿಖಾ ಸಂಸ್ಥೆ
ಈ ಸ್ಫೋಟ ದೊಡ್ಡ ದಾಳಿಗೆ ಮುಂಚಿತವಾಗಿ ನಡೆದ ಪ್ರಾಯೋಗಿಕ ದಾಳಿ. ದೊಡ್ಡ ದಾಳಿಯ ಮುನ್ಸೂಚನೆಯಂತೆ ಈ ದಾಳಿ ನಡೆಸಲಾಗಿದೆ. ಇಸ್ರೇಲ್ ಗೆ ಸಂದೇಶ ಕಳುಹಿಸುವ ಪಿತೂರಿ ಇದರಲ್ಲಡಗಿದೆ ಎಂದು ದೆಹಲಿ ಪೊಲೀಸರು ಶನಿವಾರ ಬೆಳಿಗ್ಗೆ ಹೇಳಿಕೆ ನೀಡಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಇಸ್ರೇಲ್ ಸರ್ಕಾರ ವಿಶ್ವದಾದ್ಯಂತ ತನ್ನ ರಾಯಭಾರ ಕಚೇರಿಗಳಲ್ಲಿ ಜಾಗರೂಕವಾಗಿರುವಂತೆ ನಿರ್ದೇಶನ ನೀಡಿದೆ.
ಸ್ಫೋಟದ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ನಗರದಲ್ಲಿ ಶಂಕಿತರು ಅಡಗಿರುವ ಸ್ಥಳಗಳನ್ನು ಶೋಧಿಸುತ್ತಿದ್ದಾರೆ. ಇಸ್ರೇಲಿ ಅಧಿಕಾರಿಗಳು ಪೊಲೀಸರಿಗೆ ನೆರವು ನೀಡುತ್ತಿದ್ದಾರೆ. ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕ ಕಾಗದದ ಹೊರತಾಗಿ ಸಾಕ್ಷ್ಯಗಳಿಗಾಗಿ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೊಬೈಲ್ ಟವರ್ ನ ಅಂಕಿ ಅಂಶಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸಿದ್ದು, ಸ್ಫೋಟ ಸಂಭವಿಸಿದ ಸ್ಥಳದ ಸುತ್ತಮುತ್ತ 45,000 ಮೊಬೈಲ್ ಫೋನ್ ಗಳು ಸಕ್ರಿಯವಾಗಿದ್ದವು ಎಂಬ ಮಾಹಿತಿ ದೊರೆತಿದೆ. ಆದರೆ ದುಷ್ಕರ್ಮಿಗಳು ಆ ಸಮಯ ಮೊಬೈಲ್ ಇಟ್ಟುಕೊಂಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.
ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಲಘು ಸಾಮರ್ಥ್ಯದ ಐಇಡಿ ಸ್ಫೋಟ ಸಂಭವಿಸಿತ್ತು. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದು ಈ ಸ್ಫೋಟ ಸಂಭವಿಸಿದ್ದು, ಭಯೋತ್ಪಾದನಾ ಕೃತ್ಯದ ಶಂಕೆ ವ್ಯಕ್ತವಾಗಿತ್ತು. ಶನಿವಾರ ಜೈಷ್ ಉಲ್ ಹಿಂದ್ ಸಂಘಟನೆ ಈ ಸ್ಫೋಟಕ್ಕೆ ಕಾರಣ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ಮಾಹಿತಿ ರವಾನೆಯಾಗಿರುವ ಟೆಲಿಗ್ರಾಂ ಚಾಟ್ ಪರಿಶೀಲನೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ತೊಡಗಿಕೊಂಡಿದೆ.