ದೇಶಾದ್ಯಂತ ಎನ್ಆರ್ ಸಿ ಬಳಸಲು ಚಿಂತನೆ: ಅಮಿತ್ ಶಾ
ನವ ದೆಹಲಿ, ನವೆಂಬರ್ 20: ರಾಷ್ಟ್ರೀಯ ನಾಗರೀಕ ನೋಂದಣಿ(ಎನ್ಆರ್ ಸಿ) ಯನ್ನು ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಯಾವುದೇ ಧರ್ಮ ಅನುಸರಿಸುವ ಅವನು ಅಥವಾ ಅವಳು ಭಯ ಪಡುವ ಅಗತ್ಯವಿಲ್ಲ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದರು. ಅಸ್ಸಾಂನಲ್ಲಿ ಎನ್ಆರ್ ಸಿಯ ಅಂತಿಮ ಪಟ್ಟಿಯನ್ನು ನವೀಕರಿಸಿದ್ದು, 19 ಲಕ್ಷಕ್ಕೂ ಹೆಚ್ಚು ಅರ್ಜಿದಾರರನ್ನು ಕೈಬಿಟ್ಟಿದೆ ಎಂದರು.
Recommended Video
"ಅಕ್ರಮವಾಗಿ ವಲಸೆ ಬಂದವರನ್ನು, ಮುಖ್ಯವಾಗಿ ಬಾಂಗ್ಲಾದೇಶದಿಂದ ಅಸ್ಸಾಂಗೆ ಪ್ರವೇಶಿಸಿ ಮಾರ್ಚ್ 25, 1971 ರ ನಂತರ ಅಲ್ಲೇ ನೆಲೆಸಿದವರನ್ನು ಅವರ ದೇಶಕ್ಕೆ ಗಡೀಪಾರು ಮಾಡುವ ಉದ್ದೇಶವನ್ನು ಈ ರಾಷ್ಟ್ರೀಯ ನಾಗರೀಕ ನೋಂದಣಿ ಹೊಂದಿದೆ. ಎನ್ಆರ್ ಸಿ ಯಿಂದ ಹೆಸರು ಕಾಣೆಯಾಗಿರುವವರು ತಾಲ್ಲೂಕು ಮಟ್ಟದ ತಹಶೀಲ್ದಾರ್ ನೇತೃತ್ವದ ನ್ಯಾಯಮಂಡಳಿಗಳನ್ನು ಸಂಪರ್ಕಿಸಬಹುದು" ಎಂದು ಸಂಸತ್ತಿಗೆ ತಿಳಿಸಿದರು.
'ಮಹಾ'ದಲ್ಲಿ ರಾಷ್ಟ್ರಪತಿ ಆಡಳಿತ: ಅಮಿತ್ ಶಾ ವರದಿ ಸಲ್ಲಿಕೆ
ಮನವಿ ಪತ್ರಗಳನ್ನು ಸಲ್ಲಿಸಲು ಯಾರಿಗೆ ಹಣವಿಲ್ಲವೋ ಅದನ್ನು ಅಸ್ಸಾಂ ಸರ್ಕಾರ ನೀಡುತ್ತದೆ, ಅಲ್ಲದೇ ವಕೀಲರ ಅವಶ್ಯಕತೆ ಇದ್ದಲ್ಲಿ ಅವರನ್ನು ನೇಮಿಸಿಕೊಳ್ಳುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಸಧ್ಯದ ಪರಿಸ್ಥಿತಿ ಕುರಿತು ಮಾತನಾಡಿದ ಅಮಿತ್ ಶಾ, ಅಗಸ್ಟ್ ನಲ್ಲಿ ಅಲ್ಲಿನ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಅಲ್ಲಿ ಸಾಮಾನ್ಯ ಪರಿಸ್ಥಿತಿ ಗೆ ಮರಳುತ್ತಿದೆ ಎಂದು ಹೇಳಿದರು.
ಕಾಶ್ಮೀರದ ಪರಿಸ್ಥಿತಿ ಯಾವಾಗಲೂ ಚೆನ್ನಾಗಿಯೇ ಇದೆ. ಕೆಲವರು ವಿಶ್ವಾದ್ಯಂತ ತಪ್ಪು ಕಲ್ಪನೆಗಳನ್ನು ಹರಡಿಸಿದರು. ಅಲ್ಲಿ ಸಾಮಾನ್ಯ ಸ್ಥಿತಿಯೇ ಮುಂದುವರೆದಿದೆ ಎಂದರು. ಅಗಸ್ಟ್ 5 ರಿಂದ ಇಲ್ಲಿಯವರೆಗೂ ಪೊಲೀಸ್ ಗುಂಡಿನ ದಾಳಿಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ. ಸ್ಥಳೀಯ ಸರ್ಕಾರ ಸೂಕ್ತವೆಂದ ಕೂಡಲೇ ಅಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಪುನಃ ಸ್ಥಾಪಿಸಲಾಗುತ್ತದೆ ಎಂದು ಸಂಸತ್ತಿನಲ್ಲಿ ತಿಳಿಸಿದರು.