ಕೇಂದ್ರ ಸರ್ಕಾರಕ್ಕೆ ಶಹಬ್ಬಾಶ್ ಎಂದ ಯೋಗ ಗುರು ರಾಮ್ ದೇವ್!
ನವದೆಹಲಿ, ನವೆಂಬರ್.21: ಭಾರತದಲ್ಲಿ ಕೇಂದ್ರ ಸರ್ಕಾರದ ಹೊಸ ನೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಅದನ್ನು ಜಾರಿಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಯೋಗ ಗುರು ಬಾಬಾ ರಾಮ್ ದೇವ್, ಸರ್ಕಾರದ ನೀತಿಗೆ ಶಹಬ್ಬಾಶ್ ಎಂದಿದ್ದಾರೆ.
ರಾಷ್ಟ್ರೀಯ ಪೌರತ್ವ ನೊಂದಣಿ ವಿಚಾರ ದೇಶದಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಹೇಳಿಕೆ ನೀಡಿದ್ದರು. ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಪೌರತ್ವ ನೊಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!
ಇದರ ಬೆನ್ನಲ್ಲೇ ಇದೀಗ ಯೋಗಗುರು ಬಾಬಾ ರಾಮ್ ದೇವ್, ಕೇಂದ್ರ ಸರ್ಕಾರದ ಹೊಸ ನೀತಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಾಷ್ಟ್ರೀಯ ಪೌರತ್ವ ನೊಂದಣಿ ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಭದ್ರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದು ಹೆಚ್ಚು ಅನುಕೂಲಕರವಾಗಲಿದೆ ಎಂದು ಕೇಂದ್ರ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.
ಭದ್ರತೆ ವಿಚಾರದಲ್ಲೇಕೆ ರಾಜಕಾರಣ- ರಾಮ್ ದೇವ್?
ದೆಹಲಿಯಲ್ಲಿ ಮಾತನಾಡಿರುವ ಯೋಗಗುರು ಬಾಬಾ ರಾಮ್ ದೇವ್, ರಾಷ್ಟ್ರೀಯ ಪೌರತ್ವ ನೊಂದಣಿ ವಿಚಾರವನ್ನು ರಾಜಕೀಯಗೊಳಿಸುವುದು ಬೇಡ ಎಂದರು. ಕೇಂದ್ರ ಸರ್ಕಾರದ ಹೊಸ ನೀತಿ ದೇಶದ ಭದ್ರತೆಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ರಾಜಕಾರಣ ಮಾಡುವುದು ಒಳಿತಲ್ಲ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಒಬ್ಬನೇ ಒಬ್ಬ ವ್ಯಕ್ತಿಯೂ ಅಪಾಯಕಾರಿ
ದೇಶಕ್ಕೆ ಸೇರಿರದ ಒಬ್ಬನೇ ಒಬ್ಬ ವ್ಯಕ್ತಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದರೂ ಅದು ಭದ್ರತೆ ದೃಷ್ಟಿಯಿಂದ ಅಪಾಯಕಾರಿ ಆಗಲಿದೆ. ಭಾರತದ ಏಕತೆಗೆ ಇದರಿಂದ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ. ರಾಷ್ಟ್ರೀಯ ಪೌರತ್ವ ನೊಂದಣಿ ಎಂಬುದು ಸಾಮಾಜಿಕ, ರಾಜಕೀಯ ವಿಚಾರವಲ್ಲ. ಇದು ದೇಶದ ಭದ್ರತೆಗೆ ಸಂಬಂಧಿಸಿದ್ದ ವಿಷಯವಾಗಿದ್ದು, ಇಲ್ಲಿ ರಾಜಕಾರಣವನ್ನು ಬೆರೆಸುವುದು ಸೂಕ್ತವಲ್ಲ ಎಂದು ರಾಮ್ ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎನ್ಆರ್ ಸಿ ಪ್ರಕ್ರಿಯೆ ಆರಂಭದ ಬಗ್ಗೆ ಅಮಿತ್ ಶಾ ಮಾಹಿತಿ
ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನವೆಂಬರ್.20ರಂದು ರಾಷ್ಟ್ರೀಯ ಪೌರತ್ವ ನೊಂದಣಿ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಪೌರತ್ವ ನೊಂದಣಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೇ ವೇಳೆ, ರಾಷ್ಟ್ರೀಯ ಪೌರತ್ವ ನೊಂದಣಿ ದೇಶದ ಭದ್ರತೆ ದೃಷ್ಟಿಯಿಂದ ಜಾರಿಗೊಳಿಸಲಾಗುತ್ತಿದೆ. ಇದನ್ನು ಜಾತಿ-ಧರ್ಮದ ಮೇಲೆ ಅಳೆಯುವುದು ತರವಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಕೇಂದ್ರ ಗೃಹ ಸಚಿವರ ವಿರುದ್ಧ ಗುಡುಗಿದ ದೀದಿ
ಕೇಂದ್ರ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್ಆರ್ ಸಿ ವಿಚಾರದಲ್ಲೂ ಆಕ್ಷೇಪ ವ್ಯಕ್ತಪಡಿಸಿದ್ದರು. ಬುಧವಾರವೇ ಅಮಿತ್ ಶಾ ಹೇಳಿಕೆಗೆ ದೀದಿ ತಿರುಗೇಟು ನೀಡಿದ್ದರು. ಜಾತಿ-ಧರ್ಮದ ಅಳತೆಗೋಲಿನಲ್ಲಿ ಜಾರಿಗೊಳಿಸಲು ಹೊರಟಿರುವ ಎನ್ಆರ್ ಸಿಗೆ ಪಶ್ಚಿಮ ಬಂಗಾಳದಲ್ಲಿ ಅವಕಾಶವಿಲ್ಲ. ತಮ್ಮ ರಾಜ್ಯದ ಪ್ರಜೆಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಹೇಳಿಕೆ ನೀಡಿದ್ದರು.