ರಾಜ್ಯಸಭಾ ಚುನಾವಣೆಗೆ NOTA ಬಳಸುವಂತಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ, ಆಗಸ್ಟ್ 21: ರಾಜ್ಯಸಭೆ ಚುನಾವಣೆಗೆ ನೋಟಾ(None Of The Above) ಆಯ್ಕೆಯನ್ನು ಬಳಸುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ನೀಡಿದೆ.
ಕಾಂಗ್ರೆಸ್ ಮುಖಂಡ ಶೈಲೇಶ್ ಮನುಭಾಯ್ ಪರ್ಮಾರ್ ಅವರು ರಾಜ್ಯಸಭೆಗೆ ನೋಟಾ ಬಳಕೆಗೆ ಅನುಮತಿ ನೀಡಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಅಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ನೋಟಾಕ್ಕೀಗ ಐದರ ಹರೆಯ! ಕೋಟಿ ದಾಟಿದ ಓಟಿನ ಓಟ!
ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯಪೀಠ, "ನೋಟಾ ಆಯ್ಕೆ ನೇರ ಚುನಾವಣೆಯಲ್ಲಿ ಮತದಾನ ಮಾಡುವ ವೈಯಕ್ತಿಕ ಮತದಾರರಿಗೆ ಸಂಬಂಧಿಸಿದ್ದೇ ಹೊರತು ರಾಜ್ಯಸಭೆಯಂಥ ಚುನಾವಣೆಗೆ ಇದು ಸೂಕ್ತವಲ್ಲ" ಎಂದಿದೆ.
ಗುಜರಾತಿನಲ್ಲಿ 2017 ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯ ಸಮಯದಲ್ಲಿ ನೋಟಾ ಆಯ್ಕೆಯನ್ನು ಬಳಸಲು ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆದರೆ ಇದರಿಂದಾಗಿ 'ಕುದುರೆ ವ್ಯಾಪಾರ' ಮತ್ತು 'ಭ್ರಷ್ಟಾಚಾರ'ಕ್ಕೆ ಚುನಾವಣಾ ಆಯೋಗವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ದೂರಿ ಕಾಂಗ್ರೆಸ್ ಮುಖಂಡ ಪರ್ಮಾರ್ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ನೋಟಾ ಆಯ್ಕೆಯನ್ನು ಪರಿಚಯಿಸುವುದರಿಂದ ಚುನಾವಣಾ ಆಯೋಗವೇ ಮತದಾನ ಮಾಡದೆ ಇರುವುದನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಈ ಮೊದಲೂ ಸುಪ್ರೀಂ ಕೋರ್ಟ್ ಹೇಳಿತ್ತು.